ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಸಮೃದ್ಧಿ, ವಿಮರ್ಶೆಗೆ ಬರ!

ಸಾಹಿತ್ಯ ಉತ್ಸವದಲ್ಲಿ ಬೊಳುವಾರು ವಿಷಾದ
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲೇ ಅತಿ ಹೆಚ್ಚು ಪುಸ್ತಕಗಳು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿದ್ದರೂ ಕನ್ನಡ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಗೆ ಜಾಗವೇ ಇಲ್ಲ’ ಎಂದು ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ವಿಷಾದಿಸಿದರು.

ಕನ್ನಡ ಸಾಹಿತ್ಯಕ್ಕೆ ನೀಡಿದ ಒಟ್ಟಾರೆ ಕೊಡುಗೆಗಾಗಿ ‘ಆಟಗಲಾಟ ಬೆಂಗಳೂರು ಸಾಹಿತ್ಯ ಉತ್ಸವ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಇಂದಿರಾ ಕ್ಯಾಂಟೀನ್‍ನಲ್ಲಿ ತಟ್ಟೆಯೊಂದಕ್ಕೆ ಜಿರಲೆ ಬಿದ್ದದ್ದು ಸುದ್ದಿಯಾಗುವಷ್ಟೂ ಕನ್ನಡ ಸಾಹಿತ್ಯ ಸುದ್ದಿ ಮಾಡದಿದ್ದರೆ ಹೇಗೆ?’ ಎಂದು ಪ್ರಶ್ನಿಸಿದರು.

‘ನಾನು ಬರವಣಿಗೆ ಆರಂಭಿಸಿದ ಕಾಲದಲ್ಲಿ ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಗೆ ಅವಕಾಶವಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಅವಕಾಶ ಕ್ಷೀಣಿಸುತ್ತಾ ಪೂರ್ಣ ಮರೆಯಾಗುವವರೆಗೆ ಬಂದಿದೆ. ಪುಸ್ತಕ ವಿಮರ್ಶೆಯಿಂದ ನಮ್ಮನ್ನು ನಾವು ನೋಡಿಕೊಳ್ಳುವ ಅವಕಾಶ ನಮ್ಮ ತಲೆಮಾರಿಗಿತ್ತು. ಆ ಅವಕಾಶ ಈ ತಲೆಮಾರಿಗಿಲ್ಲ’ ಎಂದು ವಿಷಾದಿಸಿದ ಅವರು, ಕನ್ನಡ ಪುಸ್ತಕಗಳ ವಿಮರ್ಶೆಗೆ ಅವಕಾಶ ಮಾಡಿಕೊಡುವಂತೆ ಪತ್ರಿಕೆಗಳಲ್ಲಿ ಮನವಿ ಮಾಡಿಕೊಂಡರು.

ಬೊಳುವಾರು ಅವರೊಂದಿಗೆ ಬಾಲಿವುಡ್‍ ನಟಿ ಹಾಗೂ ಲೇಖಕಿ ಟ್ವಿಂಕಲ್‍ ಖನ್ನ ಪ್ರಶಸ್ತಿ ಸ್ವೀಕರಿಸಿದರು. ‘ದಿ ಲೆಜೆಂಡ್‍ ಆಫ್‍ ಲಕ್ಷ್ಮೀಪ್ರಸಾದ್‍’ ಕೃತಿಗಾಗಿ ಇಂಗ್ಲಿಷ್‍ ಸಾಹಿತ್ಯದ ಜನಪ್ರಿಯ ವಿಭಾಗದಲ್ಲಿ ಟ್ವಿಂಕಲ್‍ ಪ್ರಶಸ್ತಿ ಪಡೆದರು.

ಇಂಗ್ಲಿಷ್‍ ಸಾಹಿತ್ಯದ ಸೃಜನಶೀಲ ವಿಭಾಗದಲ್ಲಿ ‘ಸ್ಮಾಲ್‍ ಟೌನ್‍ ಸೀ’ ಕೃತಿಗಾಗಿ ಪ್ರಶಸ್ತಿ ಪಡೆದ ಅನೀಸ್‍ ಸಲೀಂ ಹಾಗೂ ಸೃಜನೇತರ ವಿಭಾಗದಲ್ಲಿ ‘ಮೆಮೊಯಿರ್ಸ್ ಆಫ್‍ ಲೋನ್ ಫಾಕ್ಸ್ ಡಾನ್ಸಿಂಗ್’ ಕೃತಿಗೆ ಪ್ರಶಸ್ತಿ ಪಡೆದ ರಸ್ಕಿನ್‍ ಬಾಂಡ್‍ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಪ್ರಶಸ್ತಿಗಳು ತಲಾ ₹ 50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT