ಹುಕ್ಕೇರಿ: 'ಟಿಪ್ಪು ಜಯಂತಿ ದಿನ ಮೆರವಣಿಗೆಗೆ ಅನುಮತಿ ಇಲ್ಲ. ಸರ್ಕಾರದಿಂದ ಜಯಂತಿ ಆಚರಿಸಲು ಅನುಮತಿ ಇದೆ’ ಎಂದು ತಹಶೀಲ್ದಾರ್ ಎನ್.ಬಿ. ಪಾಟೀಲ ತಿಳಿಸಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಟಿಪ್ಪು ಸಲ್ತಾನ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ತಾಲ್ಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಿ ಹೃದಯ ವೈಶಾಲ್ಯ ಮೆರೆಯಬೇಕು’ ಎಂದು ಕೋರಿದರು. ಹನ್ನೊಂದು ಜಮಾತ್ ಅಧ್ಯಕ್ಷ ಡಾ.ಎಸ್.ಕೆ. ಮಕಾನದಾರ ಮಾತನಾಡಿ, ‘ಜಯಂತಿಗೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಪುರಸಭೆ ಅಧ್ಯಕ್ಷರೂ ಇರಬೇಕು. ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹರಿಸಬೇಕು’ ಎಂದು ಮನವಿ ಮಾಡಿದರು.
ಸಿಪಿಐ ಎಸ್.ಪಿ. ಮುರಗೋಡ ಮಾತನಾಡಿ, ‘ಟಿಪ್ಪು ಒಂದೇ ಕೋಮಿಗೆ ಸೇರಿದವರಲ್ಲ. ಇದು ಮುಸ್ಲಿಮರ ಜಯಂತಿ ಅಲ್ಲ. ಎಲ್ಲರೂ ಕೂಡಿ ಆಚರಿಸ ಬೇಕು’ ಎಂದರು.
‘ಕಾರ್ಯಕ್ರಮ ನಡೆಯುವಾಗ, ಮುಂಚೆ ಅಥವಾ ನಂತರ ಸೂಚನೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಬೇರೆಡೆ ಪೆಂಡಾಲ್ ಹಾಕಿ ಕಾರ್ಯಕ್ರಮ ಮಾಡುವಂತೆ ಕೆಲವರು ಒತ್ತಾಯಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ಲಾಕ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ರವಿ ಕರಾಳೆ, ‘ಇತರ ಮಹಾಪುರುಷರ ಜಯಂತಿಯಂತೆಯೇ ಇದನ್ನೂ ಆಚರಿಸಬೇಕು’ ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಉದಯ ಹುಕ್ಕೇರಿ, ಮುಖಂಡ ರಾದ ಇಪ್ತೀಕರ್ ಪೀರಜಾದೆ, ಲತೀಫ್ ಪೀರಜಾದೆ, ವಕೀಲ ಭೀಮಸೇನ್ ಬಾಗಿ, ಇರ್ಷಾದ್ ಮೊಕಾಶಿ, ಇಲಿಯಾಸ್ ಅತ್ತಾರ, ಸಲೀಂ ಕಳಾವಂತ, ಮೊಮೀನ್ ದಾದಾ, ಪುರಸಭೆ ಸದಸ್ಯ ಗಜಬರ ಮುಲ್ಲಾ, ಶಹಜಾನ್ ಬಡಗಾವಿ ಇದ್ದರು.