ಬೀದರ್: ‘ಕಂಠೀರವ ಸ್ಟುಡಿಯೊ 50ನೇ ವರ್ಷಾಚರಣೆ ಅಂಗವಾಗಿ ಜನವರಿಯಲ್ಲಿ ಬೀದರ್ನಲ್ಲಿ ಕಂಠೀರವ ಹಬ್ಬ ಆಯೋಜಿಸಲಾಗುವುದು’ ಎಂದು ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹೇಳಿದರು.
‘ನವೆಂಬರ್ 14 ರಂದು ಬೆಂಗಳೂರಲ್ಲಿ ಕರೆಯಲಾಗಿರುವ ನಿಗಮದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ಕಲ್ಪಿಸುವುದು ಹಾಗೂ ಚಿತ್ರರಂಗದ ಕಲಾವಿದರನ್ನು ಬೀದರ್ಗೆ ಕರೆಸಿ ಭವ್ಯ ಕಾರ್ಯಕ್ರಮ ನಡೆಸುವುದು ಕಂಠೀರವ ಹಬ್ಬದ ಉದ್ದೇಶ ಆಗಿದೆ’ ಎಂದು ಹೇಳಿದರು.
‘ಉತ್ತರ ಕರ್ನಾಟಕದಲ್ಲೂ ಅನೇಕ ಕಲಾವಿದರು ಇದ್ದಾರೆ. ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೀದರ್ನಲ್ಲಿ ಒಂದು ಸ್ಟುಡಿಯೊ ಹಾಗೂ ಕಲಾ ಶಾಲೆಯನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
‘ಕಂಠೀರವ ಸ್ಟುಡಿಯೊಗೆ ಸೇರಿದ 2.5 ಎಕರೆ ಜಮೀನನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜಕುಮಾರ ಸಮಾಧಿ ನಿರ್ಮಾಣಕ್ಕೆ ಕೊಡಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ ₹ 16 ಕೋಟಿ ಇದೆ.
ಈ ಹಣವನ್ನು ನಿಗಮಕ್ಕೆ ಪಾವತಿಸುವಂತೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆಯಲಾಗಿದೆ’ ಎಂದು ಹೇಳಿದರು. ‘ರಾಜ್ಯ ಸರ್ಕಾರ ಈ ಹಣವನ್ನು ಸ್ಟುಡಿಯೊಗೆ ಭರಿಸಿದರೆ ಸಮಾಧಿ ನಿರ್ವಹಣೆ ಹಾಗೂ ನಿಗಮದ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.