ಮಧುಗಿರಿ: ‘ಜೀತದಾಳು ಪದ್ಧತಿ ಅನಿಷ್ಟ ಪದ್ಧತಿಯಾಗಿದೆ. ಇದನ್ನು ಹೋಗಲಾಡಿಸಲು ದಿ.ದೇವರಾಜು ಅರಸು ಅವರು ಪ್ರಮುಖ ಪಾತ್ರವಹಿಸಿದ್ದರು’ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜೀತ ವಿಮುಕ್ತರಿಗೆ ಆರ್ಥಿಕ ಪುನರ್ವಸತಿ ಸೌಲಭ್ಯ ವಿತರಣೆ ಹಾಗೂ 119 ಜೀತದವರಿಗೆ ತಲಾ ₹ 20 ಸಾವಿರ ಚೆಕ್ ವಿತರಿಸಿ ಅವರು ಮಾತನಾಡಿದರು.
‘ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಉಳುವವನೆ ಭೂಮಿಯ ಒಡೆಯ ಎಂಬ ಭೂ ಸುಧಾರಣೆಯ ಕಾಯ್ದೆಯನ್ನು ಜಾರಿಗೆ ತಂದರು. ಅವರಂತೆಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಜಮೀನು ಹಾಗೂ ಇನ್ನಿತರ ಭೂಮಿಯಲ್ಲಿ ವಾಸಿಸುವವನೇ ಭೂಮಿ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದು ವಾಸಿಸುವವರಿಗೆ ಭೂಮಿಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ’ ಎಂದರು.
‘ಮಕ್ಕಳು ವಿದ್ಯಾವಂತರಾದಾಗ ಮಾತ್ರ ಈ ಅನಿಷ್ಟ ಪದ್ಧತಿ ನಿರ್ಮೂಲನೆಯಾಗುತ್ತದೆ’ ಎಂದರು. ಮುಂದಿನ ದಿನಗಳಲ್ಲಿ ಜೀತ ವಿಮುಕ್ತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ‘ಜೀತ ವಿಮುಕ್ತರಿಗೆ ಸ್ವತಂತ್ರವಾಗಿ ಬದಕನ್ನು ಕಲ್ಪಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಈ ಯೋಜನೆಗಳನ್ನು ತಲುಪಿಸಲು ಶಾಸಕರು ಮಂಚೂಣಿಯಲ್ಲಿದ್ದಾರೆ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಚೌಡಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಪುರಸಭೆ ಅಧ್ಯಕ್ಷೆ ಎಲ್.ರಾಧಾ, ತಹಶೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಣ್ಣ, ಇಒ ಎಚ್.ಡಿ.ಮಹಾಲಿಂಗಯ್ಯ, ಎಪಿಎಂಸಿ ನಿರ್ದೇಶಕ ಚಿಕ್ಕಮ್ಮ ಇದ್ದರು.