ಕೋಲಾರ: ‘ಗ್ರಾಮದ ಜನ ಒಗ್ಗೂಡಿ ಕೆರೆ ಸಂರಕ್ಷಿಸಲು ಮುಂದಾಗಬೇಕು. ಸೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಸಹಬಾಳ್ವೆಯಿಂದ ಅಭಿವೃದ್ಧಿ ಸಾಧಿಸಬೇಕು’ ಉಪನ್ಯಾಸಕ ಶಿವಪ್ಪ ಅರಿವು ಕರೆ ನೀಡಿದರು.
ಕಲೆಕ್ಟಿವ್ ಆ್ಯಕ್ಷನ್ ನೆಟ್ವರ್ಕ್ (ಕ್ಯಾನ್) ಸ್ವಯಂ ಸೇವಾ ಸಂಸ್ಥೆಯು ‘ನಮ್ಮ ನಡಿಗೆ ಕೆರೆ ಉಳಿಸುವೆಡೆಗೆ’ ಜನಾಂದೋಲನದ ಭಾಗವಾಗಿ ತಾಲ್ಲೂಕಿನ ಸೀಸಂದ್ರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕಾಡು, ಕೆರೆ, ದೇವಸ್ಥಾನ ಈ ಮೂರು ಗ್ರಾಮದ ಆಸ್ತಿಗಳು. ಇವುಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ ಬದಲಾದ ಸಂದರ್ಭದಲ್ಲಿ ಎಲ್ಲೆಡೆ ಕಾಡುಗಳು ನಾಶವಾಗುತ್ತಿವೆ. ಕೆರೆಗಳು ಒತ್ತುವರಿಯಾಗುತ್ತಿವೆ ಎಮದು ವಿಷಾದ ವ್ಯಕ್ತಪಡಿಸಿದರು.
ಗ್ರಾಮಗಳಲ್ಲಿ ದೇವಾಲಯಗಳು ಮಾತ್ರ ಉಳಿದಿವೆ. ಕೆರೆಗಳು ಗ್ರಾಮದ ದೇವಾಲಯಗಳಿದ್ದಂತೆ. ಕೆರೆಯಲ್ಲಿನ ಉತ್ಪನ್ನಗಳು ಸಮುದಾಯದ ಆಸ್ತಿ. ಅವುಗಳು ಗ್ರಾಮ ಬಿಟ್ಟು ಹೊರಗೆ ಹೋಗಬಾರದು ಎಂದು ಕಿವಿಮಾತು ಹೇಳಿದರು.
‘ಮರಳು ಮಾಫಿಯಾದಿಂದ ಕೆರೆಗಳು ಮಾಯವಾಗುತ್ತಿವೆ. ಕೆಲ ರೈತರು ಕೆರೆಗಳ ನೀರನ್ನು ಅಕ್ರಮವಾಗಿ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಕೆಲವರು ಕಟ್ಟಡ ನಿರ್ಮಾಣಕ್ಕೆ ಕೆರೆ ಅಂಗಳದಲ್ಲಿ ಮಣ್ಣು ತೆಗೆದು ಸಾಗಿಸುತ್ತಿದ್ದಾರೆ. ಇದರಿಂದ ಕೆರೆಗಳ ಚಿತ್ರಣವೇ ಬದಲಾಗುತ್ತಿದೆ’ ಎಂದು ಎಸ್.ವಿ.ನಾರಾಯಣಗೌಡ ಸ್ಮಾರಕ ಸೇವಾ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.