ಕಾರವಾರ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ತಿದ್ದುಪಡಿ ಮಸೂದೆ ವಿರೋಧಿಸಿ ಸೋಮವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಕರ್ತವ್ಯ ಸ್ಥಗಿತಗೊಳಿಸಿ, ‘ಬೆಳಗಾವಿ ಚಲೋ’ದಲ್ಲಿ ಭಾಗಿಯಾಗಿದ್ದರು. ಆದರೆ ತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರಿಗೆ ಇಲ್ಲಿನ ಪಿಕಳೆ ನರ್ಸಿಂಗ್ ಹೋಂನ ವೈದ್ಯ ಡಾ.ಸಂಜೀವ್ ಪಿಕಳೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದರು.
ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ವೀಣಾ ಅವರನ್ನು ಪಿಕಳೆ ಆಸ್ಪತ್ರೆಗೆ ಕರೆತರಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪರೀಕ್ಷಿಸಿದ ವೈದ್ಯೆ ಡಾ.ಅನುರಾಧ ಪಿಕಳೆ, ‘ಆಕೆಯ ಗರ್ಭದಲ್ಲಿ ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದೆ. ಕೂಡಲೇ ಹೆರಿಗೆ ಮಾಡಲೇಬೇಕು.
ಇಲ್ಲದಿದ್ದಲ್ಲಿ ಮಗು ಬದುಕುಳಿಯುವುದು ಕಷ್ಟ’ ಎಂದು ತಿಳಿಸಿದರು. ಈ ವೇಳೆ ಕರ್ತವ್ಯಕ್ಕೆ ಗೈರು ಆಗಿದ್ದ ಹೆರಿಗೆ ತಜ್ಞ ಡಾ.ಸಂಜೀವ್ ಪಿಕಳೆ ಅವರನ್ನು ಕುಟುಂಬದವರು ಹೆರಿಗೆ ಮಾಡಿಸುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು, ಕೋರಿಕೆಗೆ ಒಪ್ಪಿ ಸುಸೂತ್ರವಾಗಿ ಹೆರಿಗೆ ಮಾಡಿಸಿದರು. ವೀಣಾ ಅವರಿಗೆ ಗಂಡು ಮಗು ಜನಿಸಿತು.
ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಬದುಕುಳಿಸಿ ಮಾನವೀಯತೆ ಮೆರೆದ ವೈದ್ಯರಿಗೆ ಪತಿ ಪ್ರಕಾಶ್ ಅಂಕೋಲೆಕರ್ ಧನ್ಯವಾದ ತಿಳಿಸಿದರು.
‘ಕಾಯ್ದೆ, ಕಾನೂನುಗಳಿಗಿಂತ ಒಬ್ಬರ ಜೀವ ಉಳಿಸುವುದು ಮುಖ್ಯ. ತಕ್ಷಣವೇ ಹೆರಿಗೆ ಮಾಡಿಸದಿದ್ದರೆ ಮಗು ಬದುಕುಳಿಯುತ್ತಿರಲಿಲ್ಲ. ಮುಷ್ಕರ ಇರುವುದರಿಂದ ಅವಶ್ಯ ಇರುವ, ಗಂಭೀರ ಸ್ಥಿತಿಯಲ್ಲಿರುವವರನ್ನು ಮಾತ್ರ ಪರೀಕ್ಷಿಸುತ್ತಿದ್ದೇನೆ’ ಎಂದು ಡಾ.ಸಂಜೀವ್ ಪಿಕಳೆ ‘ಪ್ರಜಾವಾಣಿ’ಗೆ ತಿಳಿಸಿದರು.