ಬಳ್ಳಾರಿ: ‘ ಮೊಬೈಲ್ ಪೋನ್ ಹಾಗೂ ಅಂತರ್ಜಾಲ ದುರ್ಬಳಕೆಯಿಂದ ವಿದ್ಯಾರ್ಥಿ ಭವಿಷ್ಯ ಅಂತ್ಯವಾಗಲಿದೆ’ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಬಿ.ಹಂದ್ರಾಳ್ ಕಳವಳ ವ್ಯಕ್ತಪಡಿಸಿದರು.
ನಗರದ ಮಾಜಿ ಪುರಸಭೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಚೈಲ್ಡ್ ಲೈನ್ ನೋಡಲ್ ಸಂಸ್ಥೆ–ಕಾರ್ಡ್ ಮತ್ತು ಸಹಯೋಗ ಸಂಸ್ಥೆ ಬಿಡಿಡಿಎಸ್ ಹಾಗೂ ವಿವಿಧ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ‘ ಚೈಲ್ಡ್ ಲೈನ್ ಸೇ ದೋಸ್ತಿ ಮತ್ತು ಮಕ್ಕಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ ಮೊಬೈಲ್ ಪೋನ್ಗಳನ್ನು ಬಳಕೆಯಲ್ಲಿ ಯುವ ಜನತೆ ವಿಫಲವಾಗುತ್ತಿದ್ದಾರೆ. ಅವುಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳದೇ ತಮ್ಮ ಭವಿಷ್ಯವನ್ನು ಮಂಕಾಗಿಸಿಕೊಳ್ಳುತ್ತಿದ್ದಾರೆ. ಯುವ ಜನಾಂಗ ಆಧುನಿಕ ಮಾಧ್ಯಮಗನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ ದೊಡ್ಡ ನಗರಗಳಲ್ಲಿ ಮಾದಕ ವಸ್ತು ಮಾರಾಟ ಹೆಚ್ಚಾಗುತ್ತಿದ್ದೆ. ಅಲ್ಲದೇ, ಸಣ್ಣ ವಯಸ್ಸಿ ವಿದ್ಯಾರ್ಥಿಗಳು ವ್ಯಸನಿಗಳಾಗುತ್ತಿರುವುದು ವಿಪರ್ಯಾಸ. ತಮ್ಮ ಜೀವನವನ್ನು ಮಾನಸಿಕವಾಗಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕುರಿತು ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು. ಮಾದಕ ವಸ್ತುಗಳ ಮಾರಟ ಬಳ್ಳಾರಿ ಜಿಲ್ಲೆಯಲ್ಲಿ ಇಲ್ಲ’ ಎಂದು ಹೇಳಿದರು.
‘ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳ ಇವುಗಳನ್ನು ತಡೆಯಲು ಕೈ ಜೋಡಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ಕಂಡು ಬಂದರೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಬೇಕು. ಇಲ್ಲದಿದ್ದರೇ ಜಿಲ್ಲಾ ನ್ಯಾಯಾಲಯದ ಗಮನಕ್ಕೆ ತರಬಹುದು. ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು’ ಎಂದು ಭರವಸೆಯನ್ನು ನೀಡಿದರು.
‘ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆದು. ಇದರ ಉದ್ದೇಶ ಮಕ್ಕಳ ಸಂರಕ್ಷಣೆಗಾಗಿ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದರು. ‘ಪಾಲಕರು ಮಕ್ಕಳನ್ನು ಕಲಿಕೆಗಾಗಿ ಹಿಂಸೆಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಕ್ಕಳನ್ನು ಪ್ರೇಮತ್ವದಿಂದ ಕಾಣಬೇಕು. ಇದರಿಂದ ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾರೆ’ ಎಂದರು. ಚೈಲ್ಡ್ ಲೈನ್ ನೋಡಲ್ ಸಂಸ್ಥೆ ಸಂಯೋಜನಾಧಿಕಾರಿ ಮಂಜುನಾಥ ಪ್ರಸ್ತಾವಿಕ ಮಾತನಾಡಿದರು.
ಚೈಲ್ಡ್ ಲೈನ್ ನೋಡಲ್ ಸಂಸ್ಥೆ–ಕಾರ್ಡ್ ನಿರ್ದೇಶಕ ಬಿ.ಡಿ.ಗೌಡ ಅಧ್ಯಕ್ಷತೆವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ನಾಗರಾಜಪ್ಪ, ಕಾರ್ಮಿಕ ಅಧಿಕಾರಿ ನಾಗರಾಜಪ್ಪ, ವಿಶೇಷ ಪೊಲೀಸ್ ಘಟಕದ ಪ್ರಭಾರಿ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಹಸನ್ ಸಾಬ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಸಾರ್ವರ್, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾಧಿಕಾರಿ ಮೌನೇಶ್, ಪ್ರಾಚಾರ್ಯ ಕೆ.ತಿಮ್ಮಪ್ಪ, ಕಲಾವತಿ, ಲಲಿತಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.