ಹುಬ್ಬಳ್ಳಿ: ‘ಮಹದಾಯಿ, ಕಳಸಾ– ಬಂಡೂರಿ ಸಮಸ್ಯೆ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ ಡಿಸೆಂಬರ್ 15ರ ಒಳಗೆ ಬಗೆಹರಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ಇಲ್ಲಿ ಹೇಳಿದರು.
ಮಹದಾಯಿ ನೀರಿಗಾಗಿ ಒತ್ತಾಯಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ಕೇಶ್ವಾಪುರದ ನಿವಾಸದ ಎದುರು ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದ ನವಲಗುಂದ ರೈತ ಮುಖಂಡರಿಗೆ ಅವರು ಈ ಭರವಸೆ ನೀಡಿದರು.
‘ಯಾರೇ ವಿರೋಧ ಮಾಡಿದರೂ ಲೆಕ್ಕಿಸುವುದಿಲ್ಲ. ಗೋವಾ ಮುಖ್ಯಮಂತ್ರಿಯಿಂದ ಮಹದಾಯಿ ಯೋಜನೆ ಅನುಷ್ಠಾನ ಕುರಿತು ಸರ್ಕಾರಿ ಆದೇಶ ಹೊರಡಿಸಿ ನಿಮ್ಮ ಮುಂದೆ ಬರುತ್ತೇನೆ’ ಎಂದು ಹೇಳಿದರು.
‘ಮಹದಾಯಿ ಕುಡಿಯುವ ನೀರು ಹಂಚಿಕೆ ಸಮಸ್ಯೆ ಕಗ್ಗಂಟಾಗಲು ಕಾಂಗ್ರೆಸ್ ಕಾರಣ. ಗೋವಾ ವಿಧಾನಸಭಾ ಚುನಾವಣೆ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಬೆಂಕಿ ಹೊತ್ತಿಸಿದರು. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಅಗತ್ಯ ಇರುವ ಕುಡಿಯುವ ನೀರನ್ನು ಕೊಡಿಸಿಯೇ ತೀರುತ್ತೇನೆ’ ಎಂದರು.
ಯಡಿಯೂರಪ್ಪ ಅವರ ಭರವಸೆ ಮೇರೆಗೆ ನರಗುಂದದ ರೈತರು ಧರಣಿ ಅಂತ್ಯಗೊಳಿಸಿದರು.
‘ತಿಂಗಳವರೆಗೆ ಕಾಯುತ್ತೇವೆ. ಒಂದು ವೇಳೆ ಭರವಸೆ ಈಡೇರಿಸದೇ ಇದ್ದರೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಎದುರು ಧರಣಿ ಕೂರುತ್ತೇವೆ’ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಕೆ ನೀಡಿದರು.