ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ಪ್ರಕರಣ : ಎಸಿಪಿ ಮೇಲಿನ ಆರೋಪ ಸಾಬೀತು

Last Updated 20 ನವೆಂಬರ್ 2017, 13:01 IST
ಅಕ್ಷರ ಗಾತ್ರ

ಬೆಂಗಳೂರು: ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕ ರಾಜೀವ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್‌ ಬಾಬು ಅವರ ಮೇಲಿನ ಆರೋಪ ಸಾಬೀತಾಗಿದೆ.

ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್, ಮೂರು ಪುಟಗಳ ತನಿಖಾ ವರದಿಯನ್ನು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಅವರಿಗೆ ಸೋಮವಾರ ಸಲ್ಲಿಸಿದ್ದಾರೆ. ‘ಎಸಿಪಿ ಮಂಜುನಾಥ್‌ ಬಾಬು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

‘ಎಸಿಪಿ, ಕಾನ್‌ಸ್ಟೆಬಲ್‌, ಹೋಟೆಲ್‌ ಮಾಲೀಕ, ಸಿಬ್ಬಂದಿ ಹಾಗೂ ಕೆಲ ಸಾರ್ವಜನಿಕರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದೇನೆ. ಅದನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಿದ್ದೇನೆ. ಎಸಿಪಿ ಅವರು ಸುಖಾಸುಮ್ಮನೇ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ನಡೆಸಿ, ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಿದೆ.  ತನಿಖಾ ವರದಿಯನ್ನು ಕಮಿಷನರ್‌ ಅವರಿಗೆ ನೀಡಿದ್ದು, ಅವರೇ ಮುಂದಿನ ಕ್ರಮ ಕೈಗೊಳ್ಳಬೇಕಿದೆ’ ಎಂದು ಡಿಸಿಪಿ ಚೇತನ್‌ಸಿಂಗ್ ರಾಥೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌, ‘ಡಿಸಿಪಿ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ. ಅದು ದೊರೆತ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ವರದಿಯ ವಿವರ: ‘ನ. 9ರ ರಾತ್ರಿ 11.56 ಗಂಟೆಗೆ ಹೋಟೆಲ್‌ಗೆ ಹೋಗಿದ್ದ ಎಸಿಪಿ ಹಾಗೂ ಕಾನ್‌ಸ್ಟೆಬಲ್‌, ಹೋಟೆಲ್‌ ಬಂದ್‌ ಮಾಡುವಂತೆ ಸೂಚಿಸಿದ್ದರು. ‘ರಾತ್ರಿ 1 ಗಂಟೆವರೆಗೂ ವಹಿವಾಟು ನಡೆಸಲು ಸರ್ಕಾರದ ಆದೇಶವಿದೆ’ ಎಂದು ಹೋಟೆಲ್‌ ಮಾಲೀಕ ರಾಜೀವ್‌ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಎಸಿಪಿ, ‘ನಮಗೇ ಎದುರು ಮಾತನಾಡುತ್ತೀಯಾ’ ಎಂದು ಹೇಳಿ ಲಾಠಿಯಿಂದ ಹೊಡೆದಿದ್ದಾರೆ. ಹೋಟೆಲ್‌ನಲ್ಲಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿ ಕಾನ್‌ಸ್ಟೆಬಲ್‌ ತೊಂದರೆ ಕೊಟ್ಟಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT