ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯ ಪರಿಷತ್‌ಗೆ ಅಪಾಯ’

ಹಿರಿಯ ಸಾಹಿತಿ ಜಿ.ಎಸ್‌.ಸಿದ್ದಲಿಂಗಯ್ಯ ಕಸಾಪ ಶತಮಾನೋತ್ಸವ ದತ್ತಿ ಪ್ರಶಸ್ತಿ ಪ್ರದಾನ
Last Updated 20 ನವೆಂಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಾಹಿತಿ ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ ಅವರಿಗೆ ‘ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ದತ್ತಿ ಪ್ರಶಸ್ತಿ’ಯನ್ನು ಸೋಮವಾರ ಪರಿಷತ್‌ ವತಿಯಿಂದ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ಬೆಳವಣಿಗೆಗೆ ಶ್ರಮಿಸಿದ ಅಧ್ಯಕ್ಷರನ್ನು ಗುರುತಿಸಿ ನೀಡಲಾಗುವ ₹50,000 ನಗದು ಒಳಗೊಂಡ ದತ್ತಿ ಪ್ರಶಸ್ತಿಯನ್ನು ಪರಿಷತ್‌ ಅಧ್ಯಕ್ಷ ಡಾ.ಮನುಬಳಿಗಾರ್‌ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿದ್ಧಲಿಂಗಯ್ಯ 'ಕನ್ನಡ ಸಾಹಿತ್ಯ ಪರಿಷತ್‌ಗೆ ಅಪಾಯದ ಸ್ಥಿತಿ ಬಂದಿದೆ. ಪರಿಷತ್‌ ಮತದಾರರ ಸಂಖ್ಯೆ 3 ಲಕ್ಷಕ್ಕೆ ತಲುಪಿದೆ. ಚುನಾವಣೆ ನಡೆದರೆ ದುಡ್ಡಿದ್ದವರು ಮಾತ್ರ ಗೆಲ್ಲುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

‘ಸಾಹಿತ್ಯ ಪರಿಷತ್‌ ನಾಲ್ಕು ಗೋಡೆಗಳ ಒಂದು ಕಟ್ಟಡವಲ್ಲ, ಇದು ದೊಡ್ಡ ಸಾಂಸ್ಕೃತಿಕ ಸಂಸ್ಥೆಯ ಯಜಮಾನಿಕೆ ವಹಿಸಿಕೊಂಡಿದೆ. ಮೈಸೂರು ಒಡೆಯರು, ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಮತ್ತು ಬಂಗಾರದಂತಹ ವ್ಯಕ್ತಿತ್ವವುಳ್ಳವರು ಇದನ್ನು ಮುನ್ನಡೆಸಿದ್ದಾರೆ. ಪರಿಷತ್‌ಗೆ ಇರುವ ಪರಂಪರೆ ಕಾಯ್ದುಕೊಳ್ಳಬೇಕು’ ಎಂದರು.

‘ಅರಮನೆಗಳಿಗೆ ಇಲಿ, ಹೆಗ್ಗಣಗಳು ಸೇರಿಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್‌ ಕೂಡ 1977–78ರಲ್ಲಿ ಅಂತಹ ಕಳಂಕಕ್ಕೆ ಗುರಿಯಾಗಿತ್ತು. ಇದರಿಂದಾಗಿ ಪರಿಷತ್‌ ಆಡಳಿತ ಚುಕ್ಕಾಣಿ ಸರ್ಕಾರದ ಕೈಗೆ ಹೋಗಿತ್ತು. ಸರ್ಕಾರ ಆಡಳಿತ ಅಧಿಕಾರಿ ನೇಮಿಸಿತ್ತು. ಪುನಾ ಚುನಾಯಿತ ಅಧ್ಯಕ್ಷರನ್ನು ನೇಮಿಸಲಿದೆ ಎಂದಾಗ ಪರಿಷತ್‌ ಹಿತ ಬಯಸುವವರ ಒತ್ತಾಸೆಗೆ ಕಟ್ಟುಬಿದ್ದು, ಚುನಾವಣೆಗೆ ಸ್ಪರ್ಧಿಸಿ ಆಯ್ಕೆ ಆಗಿದ್ದೆ. ಪರಿಷತ್‌ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಸಾಮಾನ್ಯ ಸಂಗತಿ ಅಲ್ಲ, ಸಾಕ್ಷಾತ್‌ ಸರಸ್ವತಿಯ ಪೀಠದ ಅಧ್ಯಕ್ಷರಾದಂತೆ. ಈ ಎಚ್ಚರಿಕೆಯಿಂದಲೇ ನನ್ನ ಅವಧಿಯಲ್ಲಿ ಪರಿಷತ್‌ ಮುನ್ನಡೆಸಿದ್ದೆ’ ಎಂದು ನೆನಪುಗಳನ್ನು ಮೆಲು ಹಾಕಿದರು.

ಮನು ಬಳಿಗಾರ್‌ ಮಾತನಾಡಿ, ‘ಪರಿಷತ್‌ ನೀಡುವ ಪ್ರಶಸ್ತಿಗಳು ಯಾವುದೇ ಲಾಬಿ ಮಾಡದವರಿಗೆ ಸಿಗುವಂತಹ ಪ್ರಶಸ್ತಿಗಳಾಗಿವೆ. ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಮತ್ತು ಪರಿಷತ್‌ಗೆ ನೀಡಿದ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಹೊಸ ಪ್ರಯೋಗದಿಂದ ಕನ್ನಡ ಕಾವ್ಯ ಪರಂಪರೆ ಶ್ರೀಮಂತಗೊಳಿಸುವ ಕೆಲಸ ಮಾಡಿದ್ದಾರೆ. ನಾಟಕ, ಪ್ರಬಂಧ, ಕಾವ್ಯ ಪ್ರಾಕಾರಗಳಲ್ಲಿ ಇಂತಹ ಪ್ರಯೋಗಗಳು ಹೆಚ್ಚು ಹೆಚ್ಚು ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT