ಶ್ರೀಧರ್
ನಟ ಶ್ರೀಧರ್ ಅವರ ಜನ್ಮದಿನವಿಂದು (ನವೆಂಬರ್ 22, 1960). ಪುಣ್ಣಣ್ಣ ಕಣಗಾಲ್ ನಿರ್ದೇಶನದ ‘ಅಮೃತ ಘಳಿಗೆ’ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ ಶ್ರೀಧರ್, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಶ್ರೀಧರ್ ಅವರು ಓದಿದ್ದು ಎಂಜಿನಿಯರಿಂಗ್. ಆದರೂ, ಸಿನಿಮಾ ನಟನೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದರು. ಅತ್ಯುತ್ತಮ ನಟನೆಗಾಗಿ ಅನೇಕ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ. ಸಹಜಾಭಿನಯದಿಂದ ಖ್ಯಾತರಾಗಿರುವ ಶ್ರೀಧರ್ ಅತ್ಯುತ್ತಮ ಭರತನಾಟ್ಯ ಕಲಾವಿದ ಕೂಡಾ. ಶ್ರೀಧರ್ ಅವರ ಪತ್ನಿ ಅನುರಾಧಾ ಕೂಡಾ ಭರತನಾಟ್ಯ ಕಲಾವಿದೆ.
ಸುನೀಲ್ ಕುಮಾರ್ ದೇಸಾಯಿ
ಕನ್ನಡ ಚಿತ್ರರಂಗಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಹುಟ್ಟಿದ ದಿನವಿಂದು (ನವೆಂಬರ್ 22,1955). ವಿಜಯಪುರದವರಾದ ಸುನೀಲ್ ಕುಮಾರ್ ಅವರು ಉತ್ತಮ ನಿರ್ದೇಶನಕ್ಕಾಗಿ ನಾಲ್ಕು ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಟ, ನಿರ್ದೇಶಕ ಕಾಶೀನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಆರಂಭಿಸಿದ ಅವರು ನಿರ್ದೇಶಿಸಿದ ಮೊದಲ ಸಿನಿಮಾ ‘ತರ್ಕ’. 15ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಅವರು, ‘ಬೆಳದಿಂಗಳ ಬಾಲೆ’, ‘ನಮ್ಮೂರ ಮಂದಾರ ಹೂವೆ’, ‘ಸ್ಪರ್ಶ’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿರುವ ಅಪರೂಪದ ನಿರ್ದೇಶಕ ಅವರು.