ಉಳ್ಳಾಲ/ಶಿರ್ವ: ಒಖಿ ಚಂಡ ಮಾರುತದ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರ ಅಧಿಕವಾಗಿದ್ದು, ಉಳ್ಳಾಲ, ಶಿರ್ವ ಭಾಗದಲ್ಲಿ ರಸ್ತೆಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ‘ಯಾವುದೇ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಸಜ್ಜಾಗಿರುವಂತೆ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕೆಲವೊಂದು ಪ್ರದೇಶಗಳಲ್ಲಿ ತಿಳಿಸಲಾಗಿದೆ.
ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾ ನಗರ, ಸುಭಾಷ ನಗರ ಭಾಗದಲ್ಲಿ ಮನೆಗಳು ಅಪಾಯದಂಚಿನಲ್ಲಿದೆ.ಕೈಕೋ ಹಾಗೂ ಸುಭಾಷ ನಗರ ಪ್ರದೇಶದಲ್ಲಿ ಕಳೆದ ವರ್ಷ ತಡೆಗೋಡೆ ರಚಿಸಲಾಗಿದ್ದು ಕಲ್ಲುಗಳು ಸಮುದ್ರ ಪಾಲಾಗಿವೆ.
ಮೊಗ ವೀರಪಟ್ಣ ಪ್ರದೇಶದಲ್ಲಿ ಎರಡು ಕಡೆ ಅಲೆ ತಡೆಗೋಡೆ ನಿರ್ಮಿಸಿದ್ದರಿಂದ ಮೊಗವೀರಪಟ್ಣ ಭಾಗದಲ್ಲಿ ಸಮುದ್ರದ ಬೃಹತ್ ಅಲೆಗಳು ಕಂಡುಬಂದಿಲ್ಲ.ಉದ್ಯಾವರ ಪಡುಕರೆ ಸಮೀಪ ಸಮುದ್ರ ತೀರ ಪ್ರದೇಶದಲ್ಲಿ ಶನಿವಾರ ರಾತ್ರಿ ಏಕಾಏಕಿ ಸಮುದ್ರದ ನೀರಿನ ಮಟ್ಟ ಏರಿದೆ.
ಅಲೆಗಳ ಅಬ್ಬರ ಹೆಚ್ಚಿದೆ. ರಸ್ತೆಗಳು ಜಲಾವೃತವಾಗಿವೆ. ಉಡುಪಿ ಮಲ್ಪೆ , ಪಡುಬಿದ್ರಿ, ಕಾಪು, ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಅಪಾಯದ ಸೂಚನೆ ನೀಡಿದೆ.