ಮಂಗಳೂರು: ಜಿಲ್ಲಾ ನ್ಯಾಯಾಲಯದ ರಸ್ತೆಯ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಜೆ.ಆರ್. ಲೋಬೊ ಸೂಚಿಸಿದರು.
ಶನಿವಾರ ನಗರದ ಕೋರ್ಟ್ ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ರಸ್ತೆಯು ಕಿರಿದಾಗಿದ್ದು, ನ್ಯಾಯಾಲಯಕ್ಕೆ ಬರುವ ಜನರ ವಾಹನಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಈ ರಸ್ತೆಯನ್ನು ವಿಸ್ತರಿಸುವಂತೆ ವಕೀಲರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದ್ದರು ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆ ಅಭಿವೃದ್ಧಿಗೆ ₹11 ಕೋಟಿ ಮಂಜೂರು ಮಾಡಲಾಗಿದೆ. ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಪೂರ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
280 ಮೀಟರ್ ಉದ್ದದ ರಸ್ತೆ ಇದಾಗಿದ್ದು, 12 ಮೀಟರ್ ಅಗಲವಾಗಿದೆ. ಫುಟ್ಪಾತ್ ಮತ್ತು ನೀರು ಹರಿಯುವ ತೋಡು ನಿರ್ಮಿಸಲಾಗುವುದು. ವಿಸ್ತಾರ ಕಾಮಗಾರಿ ಪೂರ್ತಿಯಾದ ಕೂಡಲೇ ರಸ್ತೆ ಕಾಂಕ್ರಿಟಕರಣ ಆರಂಭಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಎ.ಸಿ. ವಿನಯ ರಾಜ್, ಜಿನೇಂದ್ರ, ಕೆಎಸ್ಆರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಕೃತಿನ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕಾಂತರಾಜ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿ ಕುಮಾರ್, ಸಹಾಯಕ ಎಂಜಿನಿಯರ್ ಶ್ರೀಧರ್ ಇದ್ದರು.