ರಬಕವಿ–ಬನಹಟ್ಟಿ: ‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳಿಂದಾಗುವ ಅನಾಹುತ ತಪ್ಪಿಸಬಹುದು. ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ತುಳಸಿಗೇರಿ ತಿಳಿಸಿದರು. ಹೆಲ್ಮೆಟ್ ಧರಿಸುವಂತೆ ಜನಜಾಗೃತಿಗಾಗಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಶನಿವಾರ ನಗರದಲ್ಲಿ ನಡೆಸಿದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿಪಿಐ ಬಿ.ಎಸ್.ಮಂಟೂರ ಮಾತನಾಡಿ, ‘ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದಿದ್ದಲ್ಲಿ ವಿಮೆ ಸಹಿತ ದೊರಕುವುದಿಲ್ಲ. ಇದನ್ನು ಸ್ವತಃ ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಜೊತೆಗೆ ಹೆಲ್ಮೆಟ್ ಕಡ್ಡಾಯ ಮಾಡುವುದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಎಸ್.ಎಂ.ಅವಜಿ, ಎಎಸ್ಐ ಎಂ.ಕೆ. ಕನ್ನಗಾರ, ಕೆ.ಟಿ. ಮಾನೆ, ಯು.ಎಸ್. ಝಾರೆ, ಬಾಬಾಗೌಡ ಪಾಟೀಲ, ಎ.ಎಲ್.ಹಲಕಿ, ಜಗದೀಶ ಪಾಟೀಲ, ಮಹೇಶ ಹನಗಂಡಿ, ಮಲ್ಲು ಲಾಯನ್ನವರ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು.