ಹಿರಿಯೂರು: ಅತಿ ಶೀಘ್ರದಲ್ಲೇ ವಸತಿರಹಿತ ಬಡವರಿಗೆ ಸೂರು ಕಲ್ಪಿಸಿಕೊಡುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಡಿ. ಸುಧಾಕರ್ ಭರವಸೆ ನೀಡಿದರು.
ನಗರದ 7ನೇ ವಾರ್ಡ್ನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅನುದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅಲ್ಲಿನ ನಿವಾಸಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನಗರಕ್ಕೆ ಹೊಂದಿಕೊಂಡಂತೆ ಸರ್ಕಾರಿ ಭೂಮಿ ಇದ್ದಿದ್ದರೆ ಬಡವರಿಗೆ ಯಾವತ್ತೋ ಮನೆ ನಿರ್ಮಿಸಿಕೊಡುತ್ತಿದ್ದೆವು. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಹತ್ತಿರದಲ್ಲಿ ಯಾವುದೇ ಖಾಸಗಿ ಭೂಮಿ ಸಿಗುವುದಿಲ್ಲ. ಭೂಮಿ ಹುಡುಕುವುದು ಕಷ್ಟದ ಕೆಲಸವಾಗಿದೆ. ಮೇಗಳಕೊಟ್ಟಿಗೆ ಸಮೀಪ ಗುರುತಿಸಿರುವ ಜಮೀನಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಎಲ್ಲ ಸೌಲಭ್ಯಗಳಿರುವ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ವಾಣಿ ವಿಲಾಸ ಜಲಾಶಯದಿಂದ ವೇದಾವತಿ ನದಿಯ ಮೂಲಕ ಬರುತ್ತಿದ್ದ ಕಲುಷಿತ ನೀರನ್ನು 1983ರಿಂದ ನಾಗರಿಕರು ಕುಡಿಯುತ್ತಿದ್ದರು. ಯಾರೂ ಬೇಡಿಕೆ ಇಡದಿದ್ದರೂ ಜಲಾಶಯದಿಂದ ನೇರವಾಗಿ ಪೈಪ್ ಲೈನ್ ಮೂಲಕ ಕುಡಿಯುವ ನೀರು ತರುವ ಕಾಮಗಾರಿ ಮುಗಿಸಲಾಗಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರು ಸಿಗುವಂತಾಗಿದೆ. ಜತೆಗೆ ನೀರಿನ ಅಪವ್ಯಯ ತಪ್ಪಿದೆ. ನಗರದಲ್ಲಿ ಇನ್ನೂ ಕೆಲವು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಜನ ಮತ್ತೊಮ್ಮೆ ಅವಕಾಶ ಕೊಡಬೇಕು ಎಂದು ಸುಧಾಕರ್ ಮನವಿ ಮಾಡಿದರು.