ಬೆಂಗಳೂರು: ‘ಇಂದಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಕಾಗಿರುವುದು ಕುಟುಂಬ ಹಾಗೂ ಲೋಕಧರ್ಮ’ ಎಂದು ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ಇಸ್ಕಾನ್ ಮಂದಿರದಲ್ಲಿ ಆಯೋಜಿಸಿದ್ದ ‘ರಾಮಾಯಣದ ಸಂದೇಶ’ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ‘ಭಾಗವತ ಸಂದೇಶ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಕೌಟುಂಬಿಕ ವ್ಯವಸ್ಥೆ ಹಾಳಾಗುತ್ತಿರುವ ಸಂದರ್ಭದಲ್ಲಿ ಭಾಗವತ ಸಂದೇಶವನ್ನು ನಾವು ಓದಬೇಕು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ರಾಮ ಮತ್ತು ಕೃಷ್ಣ, ಜಗತ್ತಿಗೆ ಕುಟುಂಬ ಹಾಗೂ ಲೋಕಧರ್ಮವನ್ನು ಸಾರಿದವರು. ಅವರ ಹಾದಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದು ಅವರು ಪ್ರತಿಪಾದಿಸಿದರು.
‘ಇಲ್ಲಿ ಬಿಡುಗಡೆಯಾದ ಪುಸ್ತಕದಲ್ಲಿ 45 ಮುಖ್ಯ ಲೇಖನಗಳು ಇವೆ. ಒಂದೊಂದು ಬರಹವೂ ನಮಗೆ ಹೊಸ ಮಾರ್ಗದರ್ಶನದ ಪ್ರತೀಕವಾಗಿವೆ. ಭಾಗವತ ಪುರಾಣವನ್ನು ವೈಜ್ಞಾನಿಕವಾಗಿಯೂ ನೋಡಲಾಗಿದೆ’ ಎಂದರು.
ವಾರಾಣಸಿಯ ಚಿಂತಕ ರಾಜೇಂದ್ರ ಮಿಶ್ರಾ, ‘ರಾಮ, ಜಗತ್ತಿಗೆ ಕಾಲ್ಪನಿಕ ಪಾತ್ರವಾಗಿ ಕಾಣಬಹುದು. ಆದರೆ ಭಾರತೀಯರಿಗೆ ಅವನು ಐತಿಹಾಸಿಕ ವ್ಯಕ್ತಿ. ರಾಮನ ಜನ್ಮಭೂಮಿಯಲ್ಲಿ ನಾವು ಹುಟ್ಟಿರುವುದು ನಮ್ಮ ಪುಣ್ಯ’ ಎಂದರು.
‘ವ್ಯಕ್ತಿತ್ವದಲ್ಲಿ ರಾಮನಿಗೆ ಎತ್ತರದ ಸ್ಥಾನ ನೀಡಲಾಗಿದೆ. ಕುಟಂಬಕ್ಕೆ ರಾಮ ನೀಡುತ್ತಿದ್ದ ಪ್ರಾಮುಖ್ಯತೆ ಕೂಡ ಜನಪ್ರಿಯ. ವಿದೇಶಿಯರು ಕೂಡ ರಾಮನ ಗುಣಗಾನ ಮಾಡುತ್ತಾರೆ’ ಎಂದರು.