ನ್ಯಾಮತಿ: ನ್ಯಾಮತಿ ಸುತ್ತಲಿನ ಹಳ್ಳಿಗಳ ರೈತರು ಗುರುವಾರ ವರ್ಷದ ಮೊದಲ ಕೃಷಿ ಚಟುವಟಿಕೆಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಯುಗಾದಿ ನಂತರ ಮೊದಲ ಬೇಸಾಯ ಆರಂಭ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಅದರಂತೆ ರೈತರು ಬೇಸಾಯಕ್ಕೆ ಚಾಲನೆ ನೀಡಿದರು.
ಎತ್ತುಗಳು ಮತ್ತು ಕೃಷಿ ಪರಿಕರಗಳನ್ನು ತೊಳೆದು ಮಾವಿನ ಸೊಪ್ಪು ಹಾಗೂ ಬಾಳೆಕಂದುಗಳನ್ನು ಕಟ್ಟಿ ಪೂಜಿಸಿದರು. ರೈತರು ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿಕೊಂಡು, ಹೊಸ ಬಟ್ಟೆ ಧರಿಸಿ, ಕುಟುಂಬದ ಸದಸ್ಯರೊಂದಿಗೆ ಜಮೀನಿಗೆ ತೆರಳಿ ಭೂಮಿಪೂಜೆ ನೆರವೇರಿಸಿದರು.
‘ನೈವೇದ್ಯ ಅರ್ಪಿಸಿ, ಮಳೆ–ಬೆಳೆ ಸಮೃದ್ಧಿಯಾಗಲಿ ಎಂದು ದೇವರಲ್ಲಿ ಮೊರೆಇಟ್ಟು, ಬೇಸಾಯ ಆರಂಭಿಸುವುದು ಪೂರ್ವಜರ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿ ಎಲ್ಲಾ ರೈತರು ಯುಗಾದಿ ನಂತರ ಮೊದಲ ಬೇಸಾಯ ಮಾಡುತ್ತಾರೆ’ ಎಂದು ಜೋಗದ ಶಿವಕುಮಾರ ಹೇಳಿದರು.