ಮುಂಬೈ: ಭಾರತದಲ್ಲಿ ಕೇವಲ ಅತ್ಯಾಚಾರ ಮತ್ತು ಅಪರಾಧಗಳು ನಡೆಯುತ್ತವೆ ಎನ್ನುವ ಭಾವನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಇದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ವಿಚಾರವಾದಿಗಳು ಮತ್ತು ಜಾತ್ಯತೀತ ವ್ಯಕ್ತಿಗಳು ಸಹ ಇಲ್ಲಿ ಸುರಕ್ಷಿತವಾಗಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಸಿ. ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ಕೈಗೊಳ್ಳಬೇಕು ಎಂದು ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಯಾವುದೇ ದೇಶಕ್ಕೆ ಹೋದರೂ ಪ್ರಶ್ನೆಗಳ ಸುರಿಮಳೆಗೈಯುತ್ತಾರೆ. ವಿಚಾರವಾದಿಗಳು, ಮುಕ್ತ ಮನಸ್ಸು ಹೊಂದಿದವರು ಮತ್ತು ಜಾತ್ಯತೀತ ವ್ಯಕ್ತಿಗಳು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎನ್ನುವ ಭಾವನೆ ವಿದೇಶಿಯರಲ್ಲಿದೆ. ಕೆಲವು ವ್ಯಕ್ತಿಗಳ ಹೇಯ ಕೃತ್ಯದಿಂದ ಭಾರತದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಪೀಠ ತಿಳಿಸಿತು.