ಕಂಪ್ಲಿ:ಇಲ್ಲಿಯ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.
ಹರಕೆ ಹೊತ್ತ ಕೆಲ ಮೀನುಗಾರರು ಕಾರು, ಹಂತಿ ಗುಂಡು, ಆಟೊ, ಸಣ್ಣ ತೇರನ್ನು ಎಳೆಯುವ ಮುನ್ನ ತಮ್ಮ ಬೆನ್ನುಗಳ ಹಿಂದೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಅದಕ್ಕೆ ಪ್ಲಾಸ್ಟಿಕ್ ಹಗ್ಗ ಕಟ್ಟಿಕೊಂಡು ತುಂಗಭದ್ರಾ ನದಿಯಿಂದ ಸುಂಕ್ಲಮ್ಮ ದೇವಸ್ಥಾನದ ತನಕ ಎಳೆದರು.
ಹರಕೆ ತೀರಿಸಿದ ಎಲ್ಲರೂ 9, 11 ಮತ್ತು 16 ಅಡಿ ಉದ್ದದ ಒಂದೊಂದು ಅಸ್ತ್ರ(ಮುರುಗಾಸ್ತ್ರ, ತ್ರಿಶೂಲಾಸ್ತ್ರ) ಕೆನ್ನೆಗಳಿಗೆ ಹಾಕಿಕೊಂಡಿದ್ದು ವಿಶೇಷವಾಗಿತ್ತು. ಹರಕೆ ಹೊತ್ತ ಭಕ್ತರಿಗೆ ಸಂಬಂಧಿಕರು ದಾರಿ ಮಧ್ಯೆ ನೀರು ಕುಡಿಸುವುದು ಮತ್ತು ಬೀಸಣಿಗೆಯಿಂದ ಗಾಳಿ ಸೇವೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಸುಮಾರು 41 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲು ಇದ್ದರೂ, ಅದನ್ನು ಲೆಕ್ಕಿಸದೆ ಹರಕೆ ತೀರಿಸುವ ಮೀನುಗಾರರನ್ನು ನೋಡಲು ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು.
ಕಾಳಮ್ಮದೇವಿ ಪೂಜಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ, ಗಂಗಾಸ್ಥಳ, ಕುಂಭ ಉತ್ಸವ, ವಿವಿಧ ಧಾರ್ಮಿಕ ಆಚರಣೆಗಳು ಶ್ರದ್ಧೆ ಹಾಗೂ ಭಕ್ತಿಯಿಂದ ಜರುಗಿದವು.
ಕೋಟೆ ಪ್ರದೇಶದ ಮೀನುಗಾರರ ಸಂಘದ ಪದಾಧಿಕಾರಿಗಳು, ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ಜರುಗಿತು.
ನೋವು ಆಗಲ್ಲ..
‘ನಮ್ಮ ಇಷ್ಟಾರ್ಥ ಈಡೇರಿಸುವ ದೇವಿಗೆ ಭಕ್ತಿ ಸಮರ್ಪಣೆ ಮಾಡಲು ಆಯ್ದುಕೊಂಡ ಕಠಿಣ ಸೇವೆ ಇದು. ಇದರಲ್ಲಿ ಯಾವುದೇ ನೋವು ಕಾಣುವುದಿಲ್ಲ ಎನ್ನುತ್ತಾರೆ ಹರಕೆ ತೀರಿಸಿದ ಮೀನುಗಾರ ಸಮುದಾಯದ ಭಕ್ತರು.