ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ಸಾಹಿತ್ಯ ಮೇಳಕ್ಕೆ ಸಂಭ್ರಮದ ತೆರೆ

Last Updated 28 ಮೇ 2018, 6:56 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಎರಡು ದಿನಗಳಿಂದ ನಡೆದ ಐದನೇ ‘ಮೇ ಸಾಹಿತ್ಯ ಮೇಳ’ ಭಾನುವಾರ ಸಂಜೆ ಸಮಾರೋಪಗೊಂಡಿತು.

‘ಬಂಡ್ರಿ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿಯನ್ನು ಲೇಖಕಿ ಕೆ. ನೀಲಾ ಅವರಿಗೆ ಹಾಗೂ ’ತೊಗಲ ಚೀಲದ ಕರ್ಣ’ ಕೃತಿಯ ಲೇಖಕ ಎಚ್. ಲಕ್ಷ್ಮಿ ನಾರಾಯಣಸ್ವಾಮಿ ಅವರಿಗೆ ‘ವಿಭಾ ಸಾಹಿತ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಡಾ.ಕಾಳೇಗೌಡ ನಾಗವಾರ ಹಾಗೂ ಪ್ರೊ. ಚಂದ್ರಶೇಖರ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ನೀಲಾ, ‘ದೇಶದಲ್ಲಿ ವಿಚಾರವಾದಿಗಳ ಧ್ವನಿ ಅಡಗಿಸುವ, ಭಯ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನಾವು ಬದುಕಬೇಕು, ಗೆಲ್ಲಬೇಕು ಎನ್ನುವುದಾದರೆ
ಬೀದಿಗೆ ಬರಬೇಕು. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂದರು.

’ನಾನು ಯಾರ ಮಧ್ಯದಲ್ಲಿ ಕೆಲಸ ಮಾಡಿದ್ದೇನೋ ಅವರಿಗೆ ಪ್ರಶಸ್ತಿ ಸಲ್ಲುತ್ತದೆ. ಈ ಪ್ರಶಸ್ತಿ ಕೂಡ ಹೋರಾಟದ ಭಾಗ. ಆ ಹೋರಾಟವನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಸಮಾರೋಪ ಭಾಷಣ ಮಾಡಿದ ಪ್ರೊ.ಚಂದ್ರಶೇಖರ ಪಾಟೀಲ, ‘ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಧ್ವನಿಯಾಗಿ, ಅಪಾಯದ ಅಂಚಿನಲ್ಲಿರುವ ಬಹುತ್ವದ ಉಳಿವಿಗಾಗಿ, ಸೌಹಾರ್ದದ ಬದುಕಿನ ಆಶಯದೊಂದಿಗೆ ಈ ಸಾಹಿತ್ಯ ಮೇಳ ಆಯೋಜನೆಗೊಂಡಿರುವುದು ಸ್ತುತ್ಯರ್ಹ’ ಎಂದರು.

’ಧಾರವಾಡದ ಸಾಹಿತ್ಯ ಸಂಭ್ರಮದ ಮೊದಲ ಆವೃತ್ತಿಗಳಲ್ಲಿ ನಾನು ಭಾಗವಹಿಸಿದ್ದೆ. ಆದರೆ, ವರ್ಷದಿಂದ ವರ್ಷಕ್ಕೆ ಅದು ಬಲಪಂಥೀಯ ಚಿಂತನೆಗಳಿಗೆ ಆದ್ಯತೆ ನೀಡತೊಡಗಿತು. ಸಂಭ್ರಮ ಕೇಸರಿ ಬಣ್ಣದ ಆಕಾರ ಪಡೆಯಿತು. ಸಾಹಿತ್ಯ ಸಂಭ್ರಮದ ರೂವಾರಿಯಾಗಿದ್ದ ಡಾ. ಗಿರಡ್ಡಿ ಗೋವಿಂದರಾಜ ಸಂಘಟಕ ಆಗಿರಲಿಲ್ಲ. ಇವೆಂಟ್ ಮ್ಯಾನೇಜರ್ ಆಗಿದ್ದರು. ಇದೇ ಕಾರಣ ನಾನು ಅಲ್ಲಿಂದ ದೂರ ಉಳಿದು ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲು ಪ್ರಾರಂಭಿಸಿದೆ’ ಎಂದರು.

’ಮೊದಲ ಸಾಹಿತ್ಯ ಸಂಭ್ರಮಕ್ಕೂ ಮುಂಚೆ ಮೇ ಸಾಹಿತ್ಯ ಮೇಳದ ಸಂಘಟಕರು ದೂರವಾಣಿ ಕರೆ ಮಾಡಿ ಅದು ಬಲಪಂಥೀಯ, ಮನುವಾದಿಗಳ ಸಂಭ್ರಮ ಎಂದು ಕಿವಿಮಾತು ಹೇಳಿದ್ದರು. ಆದರೆ, ಡಾ. ಗಿರಡ್ಡಿ ಗೋವಿಂದರಾಜ ಅವರಿರುವ ಕಾರಣಕ್ಕೆ ಮಾತ್ರ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ’ ಎಂದು ಚಂಪಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT