ನವದೆಹಲಿ: ಯಾವುದೇ ಮುಖ್ಯಮಂತ್ರಿ ಸುದೀರ್ಘ ಕಾಲ ಕರ್ತವ್ಯದಿಂದ ಗೈರುಹಾಜರಾಗುವುದು, ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
‘ಬಂಧನದ ನಂತರವೂ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರವು ಅವರ ವೈಯಕ್ತಿಕವಾದುದು’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್.ಅರೋರಾ ಅವರಿದ್ದ ಪೀಠವು ಅಭಿಪ್ರಾಯಪಟ್ಟಿತು.
‘ಮುಖ್ಯಮಂತ್ರಿ ಸ್ಥಾನವು ಆಲಂಕಾರಿಕವಾದುದಲ್ಲ. ಪ್ರಾಕೃತಿಕ ವಿಕೋಪಗಳು ಸೇರಿದಂತೆ ಯಾವುದೇ ಪರಿಸ್ಥಿತಿಗೆ ಸ್ಪಂದಿಸಲು ಆಗುವಂತೆ ದಿನದ 24 ಗಂಟೆ ಸಾರ್ವಜನಿಕ ಸಂಪರ್ಕಕ್ಕೆ ಲಭ್ಯರಿರಬೇಕಾದ ಹುದ್ದೆ. ಇಂಥ ಸ್ಥಾನವನ್ನು ಹೊಂದಿರುವ ಯಾವುದೇ ವ್ಯಕ್ತಿ ಸುದೀರ್ಘ ಕಾಲ ಕರ್ತವ್ಯದಿಂದ ದೂರ ಇರುವುದು ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಹೇಳಿತು.
ದೆಹಲಿ ಮಹಾನಗರಪಾಲಿಕೆ ವ್ಯಾಪ್ತಿಯ ಶಾಲೆಗಳ ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ, ಲೇಖನಸಾಮಗ್ರಿ ಪೂರೈಸಿಲ್ಲ ಎಂದು ಎನ್ಜಿಒ ಸೋಷಿಯಲ್ ಜ್ಯೂರಿಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.