ಹೈದರಾಬಾದ್: ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಭಾನುವಾರ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
ತೆಲಂಗಾಣದ ಮೇಡಕ್ ಜಿಲ್ಲೆಯ ಅಲ್ಲದುರ್ಗದಿಂದ ಆರಂಭವಾದ 60ನೇ ದಿನ ಯಾತ್ರೆಯಲ್ಲಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್ಪಿಎಸ್) ಮುಖಂಡ ಮಂದಾ ಕೃಷ್ಣ ಮಾದಿಗ ಸಹ ಪಾಲ್ಗೊಂಡರು.
ಜಿಲ್ಲೆಯ ಪೆದ್ದಪುರ ಗ್ರಾಮದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ದೇಶದಲ್ಲಿ 2014ರ ನಂತರ ನಿರುದ್ಯೋಗ ಸಮಸ್ಯೆ ಹಾಗೂ ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗಿದೆ’ ಎಂದು ಟೀಕಿಸಿದರು.
‘ಮೈಸೂರಿನ ಸೇವಾ ದಳದ ಕಾರ್ಯಕರ್ತರು ಹಾಡಿದ ರಾಷ್ಟ್ರ ಗೀತೆ ಹಾಗೂ ಧ್ವಜ ಗೀತೆಯೊಂದಿಗೆ 60ನೇ ದಿನದ ಭಾರತ್ ಜೋಡೊ ಯಾತ್ರೆ ಆರಂಭವಾಯಿತು. ಈ ದಿನ ನಾವು ಮೇಡಕ್ ಜಿಲ್ಲೆಯಿಂದ ಹೊರಟು, ಕಾಮರೆಡ್ಡಿ ಜಿಲ್ಲೆ ಪ್ರವೇಶಿಸಿದೆವು’ ಎಂದು ಮುಖಂಡ ಜೈರಾಮ್ ರಮೇಶ ಟ್ವೀಟ್ ಮಾಡಿದ್ದಾರೆ.