ಅದೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 676. ಅದರಲ್ಲಿ 300 ವಿದ್ಯಾರ್ಥಿಗಳು ಒಂದರಿಂದ ನಾಲ್ಕನೇ ತರಗತಿಯ ತನಕದವರಾಗಿದ್ದರೆ, ಪೂರ್ವ ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ 376. ಅಲ್ಲಿರುವ ಒಟ್ಟು ಶಿಕ್ಷಕರ ಸಂಖ್ಯೆ 24. ಅದರಲ್ಲಿ ಸರ್ಕಾರ ನೇಮಿಸಿದವರ ಸಂಖ್ಯೆ 10. ಶಾಲೆಯ ಶಿಕ್ಷಕರು ಮತ್ತು ಪಾಲಕರ ಸಂಘ (ಪಿ.ಟಿ.ಎ) ನೇಮಿಸಿರುವ ಶಿಕ್ಷಕರ ಸಂಖ್ಯೆ 14. ಹೀಗೆ ನೇಮಕಗೊಂಡ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ನಿಧಿಯಿಂದ ಗೌರವಧನ ಪಾವತಿಸಲಾಗುತ್ತದೆ.
ಹೀಗೆ ಗೌರವಧನಕ್ಕಾಗಿ ಕೆಲಸ ಮಾಡುತ್ತಿರುವ ಶಿಕ್ಷಕಿಯೊಬ್ಬರ ಮಕ್ಕಳೂ ಇದೇ ಶಾಲೆಯಲ್ಲಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನೂರರಷ್ಟಿದ್ದರೇ ಹೆಚ್ಚು ಎಂಬ ಭಾವನೆಇರುವ ಈ ಕಾಲದಲ್ಲಿ ಇಂಥದ್ದೊಂದು ಶಾಲೆ ಇರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಶಾಲೆ ಇರುವುದು ನೆರೆಯ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಕೊಟಗೆರೆ ಬ್ಲಾಕ್ನಲ್ಲಿರುವ ಕೊಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.
ಅಜೀಂ ಪ್ರೇಮ್ಜಿ ಫೌಂಡೇಶನ್, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ಭಾಗವಾಗಿ ಮಕ್ಕಳು ಹಾಗೂ ಶಾಲೆಯ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ವಿವಿಧ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಹಂತಹಂತವಾಗಿ ಅಧ್ಯಯನ ನಡೆಸಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಂಶುಪಾಲರಿಗೆ ಶೈಕ್ಷಣಿಕ ಪರಿಕಲ್ಪನೆಗಳ ಆಳವಾದ ಪರಿಚಯ ಮಾಡಿಕೊಡುವುದರ ಭಾಗವಾಗಿ ತಂಡವೊಂದು ಕೇರಳ ರಾಜ್ಯಕ್ಕೆ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಕಾಣಸಿಕ್ಕಿದ್ದು ಮೇಲಿನ ಶಾಲೆ. ‘ಸರ್ಕಾರಿ ಶಾಲೆ’ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿರುವ ಇಂಥ ಅನೇಕ ಶಾಲೆಗಳು ಕೇರಳದಲ್ಲಿವೆ. ಕೊಡಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಮೇಲೆ ಉದಾಹರಿಸಿದ ಶಾಲೆಯ ಸುತ್ತಮುತ್ತ ಆರು ಖಾಸಗಿ ಶಾಲೆಗಳಿವೆ. ಆದರೆ ಅಲ್ಲೆಲ್ಲೂ ಸರ್ಕಾರಿ ಶಾಲೆಯಲ್ಲಿರುವಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಲ್ಲ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾನ ಎನಿಸುವ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿರುವ ಕೇರಳದಲ್ಲಿ ಇದು ಸಹಜ ಎಂದುಬಿಡಬಹುದು. ಆದರೆ ಅಲ್ಲಿಯೂ ಖಾಸಗಿ ಶಾಲೆಗಳು ಉತ್ತಮ ಎಂದು ಭಾವಿಸುವ ಪಾಲಕರಿದ್ದಾರೆ. ಹಾಗೆಯೇ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಗತ್ಯ ಎಂದು ತಿಳಿದಿರುವ ಪಾಲಕರ ಸಂಖ್ಯೆಯೂ ನಮ್ಮಲ್ಲಿಗಿಂತ ಕಡಿಮೆಯೇನಿಲ್ಲ. ಒಟ್ಟರ್ಥದಲ್ಲಿ ಕೇರಳದ ಸರ್ಕಾರಿ ಶಾಲೆಗಳೂ ಕರ್ನಾಟಕದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವಂಥದ್ದೇ ಸವಾಲುಗಳನ್ನು ಎದುರಿಸುತ್ತಿವೆ. ಆದರೆ ಅಲ್ಲಿ ಸವಾಲನ್ನು ಎದುರಿಸುವ ತಂತ್ರವೊಂದು ಸರ್ಕಾರ ಮತ್ತು ಪಾಲಕರ ಆಸಕ್ತಿಯಿಂದಲೇ ರೂಪುಗೊಂಡಿರುವುದಷ್ಟೇ ವಿಶೇಷ.
ಕರ್ನಾಟಕದಲ್ಲಿರುವಂತೆಯೇ ಕೇರಳದಲ್ಲಿ ಶಾಲಾಭಿವೃದ್ಧಿ ಸಮಿತಿಗಳಿವೆ. ಆದರೆ ಅಲ್ಲಿ ಪಿ.ಟಿ.ಎ.ಗಳು ಹೆಚ್ಚು ಪ್ರಬಲವಾಗಿವೆ. ಶಾಲಾಭಿವೃದ್ಧಿ ಸಮಿತಿ ಏನೇ ಮಾಡಬೇಕೆಂದರೂ ಶಾಲೆಯ ಆಗುಹೋಗುಗಳ ನಿಜವಾದ ಪಾಲುದಾರರಾದ ಶಿಕ್ಷಕರು ಮತ್ತು ಪಾಲಕರನ್ನು ಒಲಿಸಿಕೊಳ್ಳಲೇಬೇಕಾಗುತ್ತದೆ. ಕೊಡಲಿಯಲ್ಲಿರುವ ಶಾಲೆಯ ಉದಾಹರಣೆಯನ್ನೇ ತೆಗೆದುಕೊಂಡರೂ ಇದು ಅರ್ಥವಾಗುತ್ತದೆ. ಈ ಶಾಲೆಯ ಕೈತೋಟವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವುದು ಪಿ.ಟಿ.ಎ.
ಸರ್ಕಾರದಿಂದ ದೊರೆಯುವ ಅನುದಾನದಿಂದಷ್ಟೇ ಶಾಲೆಯ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹೆಚ್ಚುವರಿ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಿರುವ ಮೊತ್ತವನ್ನು ದಾನಿಗಳಿಂದ ಪಡೆಯುವುದಕ್ಕೆ ಮಾಡಬೇಕಾಗಿರುವ ಪ್ರಯತ್ನವೂ ಪಿ.ಟಿ.ಎ ಕಡೆಯಿಂದಲೇ ನಡೆಯುತ್ತದೆ. ಶಾಲೆಯ ಎಲ್ಲ ಚಟುವಟಿಕೆಗಳೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಪಾಲಕರಿಗೂ ಸಂಬಂಧವಿರುವಂತೆ ನೋಡಿಕೊಂಡಿರುವುದರಿಂದ ಒಂದು ಸಾಮುದಾಯಿಕ ಮೇಲುಸ್ತುವಾರಿ ಸಹಜವಾಗಿಯೇ ರೂಪುಗೊಂಡಿದೆ. ಇವೆಲ್ಲದರ ಪರಿಣಾಮ ಶಾಲೆಯ ಒಟ್ಟು ಚಟುವಟಿಕೆಗಳಲ್ಲೂ ಕಾಣಸಿಗುತ್ತದೆ.
ಸುಮಾರು ನಲವತ್ತು ನಿಮಿಷ ನಡೆಯುವ ಶಾಲೆಯ ಬೆಳಗಿನ ಸಭೆಯನ್ನು ಸಂಪೂರ್ಣವಾಗಿ ಮಕ್ಕಳೇ ನಡೆಸಿಕೊಡುತ್ತಾರೆ. ನಾವು ಭೇಟಿ ನೀಡಿದ ಈ ಶಾಲೆಯ ಸಭೆಯನ್ನು ಮೂರನೇ ತರಗತಿಯ ಮಕ್ಕಳು ನಡೆಸಿಕೊಟ್ಟರು. ಸುಮಾರು ಮೂವತ್ತು ಮಕ್ಕಳು ವೇದಿಕೆಯ ಮೇಲಿದ್ದರು. ದಿನಪತ್ರಿಕೆಯ ಮುಖ್ಯಾಂಶಗಳಿಂದ ಆರಂಭಿಸಿ ಒಗಟು ಬಿಡಿಸುವಿಕೆ, ರಸಪ್ರಶ್ನೆ, ಗಾಂಧೀಜಿಯ ಚಿಂತನೆ... ಹೀಗೆ ಬೆಳಗಿನ ಸಭೆ ಕೇವಲ ಯಾಂತ್ರಿಕವಾಗದಂತೆ ನೋಡಿಕೊಳ್ಳಲಾಗಿತ್ತು. ವೇದಿಕೆಯ ಮೇಲಿದ್ದ ಮಕ್ಕಳಿಗೆ ವೇದಿಕೆಯ ಮುಂದಿದ್ದ ಮಕ್ಕಳೂ ಪ್ರಶ್ನೆ ಕೇಳುತ್ತಿದ್ದರು. ಭಾಷೆಯೂ ಅಷ್ಟೇ ಮಲಯಾಳಂ ಮತ್ತು ಇಂಗ್ಲಿಷ್ಗಳೆರಡೂ ಸಂದರ್ಭಕ್ಕೆ ತಕ್ಕಂತೆ ಬಳಕೆಯಾಗುತ್ತಿದ್ದವು. ಅಂದರೆ ಕಲಿಕೆಯೆಂಬುದು ತರಗತಿಯೊಳಕ್ಕೆ ಸೀಮಿತ-ವಾಗದೆ ಹೊರಗೂ ಬಂದಿತ್ತು. ಶಿಕ್ಷಕರ ಮಧ್ಯಪ್ರವೇಶವೇ ಇಲ್ಲದೆ ಮಕ್ಕಳ ಮಧ್ಯೆಯೇ ನಡೆಯುವ ಸಂವಹನವೇ ಅನೇಕ ವಿಚಾರಗಳನ್ನು ಅವರಿಗೆ ಕಲಿಸುತ್ತಲೂ ಇದ್ದವು. ಶಾಲೆ ಹೀಗೆ ಚಟುವಟಿಕೆಯಿಂದ ತುಂಬಿಕೊಂಡಿರುವುದು ಪಾಲಕರಲ್ಲೂ ಉತ್ಸಾಹ ಹುಟ್ಟಿಸುತ್ತಿದೆ. ಜೊತೆಗೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಎನ್ನುವ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಇದು ನಾವು ಸಂದರ್ಶಿಸಿದ ಒಂದು ಶಾಲೆಗೆ ಸೀಮಿತವಾದ ಮಾದರಿಯೇನಲ್ಲ. ಇದು ಕೇರಳದ ಹದಿನಾಲ್ಕೂ ಜಿಲ್ಲೆಗಳ ಬಹುದೊಡ್ಡ ಸಂಖ್ಯೆಯ ಸರ್ಕಾರಿ ಶಾಲೆಗಳಲ್ಲಿ ಕಾಣಸಿಗುತ್ತದೆ. ಹಾಗೆಯೇ ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳಲ್ಲೂ ಇಂಥದ್ದೊಂದು ವಾತಾವರಣವನ್ನು ಸೃಷ್ಟಿಸಲು ಇಲ್ಲಿನ ಶಿಕ್ಷಣ ವ್ಯವಸ್ಥೆಗೆ ಸಾಧ್ಯವಾಗಿದೆ. ಇದರ ಹಿಂದೆ ಬಹುಮುಖ್ಯ ಪಾತ್ರ ವಹಿಸಿರುವುದು ಶಾಲೆಯ ಆಗುಹೋಗುಗಳಲ್ಲಿ ಪಾಲಕರನ್ನು ಒಳಗೊಳ್ಳುವ ಪ್ರಯತ್ನ. ಶಾಲೆಗಳಲ್ಲಿ ಪಿ.ಟಿ.ಎ ಪ್ರಬಲವಾಗಿರುವುದೇ ಇದಕ್ಕೆ ಬಹುದೊಡ್ಡ ಸಾಕ್ಷಿ. ಪಾಲಕರು ಶಾಲೆಯ ಬಗ್ಗೆ ಆಸಕ್ತಿ ವಹಿಸುವುದರಿಂದ ಗ್ರಾಮ ಪಂಚಾಯಿತಿಯೂ ಸೇರಿದಂತೆ ಇಡೀ ಸರ್ಕಾರಿ ವ್ಯವಸ್ಥೆ ಕೂಡಾ ಶಾಲೆಯ ಅಗತ್ಯಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಒತ್ತಡ ಸೃಷ್ಟಿಯಾಗುತ್ತದೆ. ಈ ಮಾದರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಶಿಕ್ಷಕರನ್ನು ಹೊಸ ಬಗೆಯ ಬೋಧನಾ ವಿಧಾನಗಳಿಗೆ ಸಿದ್ಧಪಡಿಸಿರುವ ಕೇರಳದ ಡಯಟ್ಗಳ ಪಾತ್ರ ಕಾಣಿಸುತ್ತದೆ.
ಶಿಕ್ಷಕರಿಗೆ ತರಬೇತಿ ನೀಡುವುದೆಂದರೆ ಶಾಲಾ ಅವಧಿಯಲ್ಲಿ ಅವರನ್ನು ತರಬೇತಿಗಾಗಿ ಕರೆಸಿಕೊಳ್ಳುವುದು ಎಂಬುದನ್ನು ಕೇರಳ ಸಂಪೂರ್ಣವಾಗಿ ಬದಲಾಯಿಸಿದೆ. ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗಷ್ಟೇ ಇರುತ್ತವೆ. ಇದರಿಂದ ಒಟ್ಟಾರೆ ಕೆಲಸದ ದಿನಗಳು ಕಡಿಮೆಯಾಗಿಲ್ಲ. ಶಿಕ್ಷಕರ ಸಾಮರ್ಥ್ಯಾಭಿವೃದ್ಧಿ ತರಬೇತಿಗಳೆಲ್ಲವೂ ರಜಾ ದಿನಗಳಲ್ಲೇ ನಡೆಯುತ್ತವೆ. ಬೇಸಿಗೆ ರಜೆಯ ದಿನಗಳಲ್ಲಿ ಐದು ದಿನಗಳ ಅವಧಿಯ ತರಬೇತಿಯನ್ನು ಶಿಕ್ಷಕರಿಗೆ ನೀಡಲಾ-ಗುತ್ತದೆ. ಈ ಅವಧಿಯ ರಜೆಯನ್ನು ಮುಂದೆ ತೆಗೆದುಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಪರಿಣಾಮವಾಗಿ ಶಿಕ್ಷಕರು ರಜಾ ದಿನಗಳಲ್ಲಿ ತರಬೇತಿಗೆ ಹಾಜರಾಗುವುದನ್ನು ಒಂದು ಹೇರಿಕೆ ಎಂದು ಭಾವಿಸುವುದಿಲ್ಲ. ಶಿಕ್ಷಕರಲ್ಲಿ ಕಂಪ್ಯೂಟರ್ ಬಗ್ಗೆ ಜ್ಞಾನ ಮೂಡಿಸುವುದಕ್ಕಾಗಿಯೇ ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗಗಳಿವೆ. ಈ ವಿಷಯದಲ್ಲಿ ತಜ್ಞರಾಗಿರುವ ಒಬ್ಬ ಶಿಕ್ಷಕರು ತಮ್ಮ ಸಹೋದ್ಯೋಗಿಗಳಿಗೆ ಈ ಕುರಿತಂತೆ ಸಂಜೆ ಏಳರ ನಂತರ ತರಬೇತಿ ನೀಡುತ್ತಾರೆ.
ಡಯಟ್ಗಳ ಪಾತ್ರ ಕೇವಲ ಶಿಕ್ಷಕರಿಗೆ ತರಬೇತಿ ನೀಡುವುದಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಪ್ರತಿ ಪಂಚಾಯಿತಿಯಲ್ಲಿ ನೂರು ಶಾಲೆಗಳನ್ನು ಆರಿಸಿಕೊಂಡು ಹಳೆಯ ವಿದ್ಯಾರ್ಥಿಗಳ ಸಂಘಟನೆ, ಪಿ.ಟಿ.ಎ, ಶಾಲಾ ನಿರ್ವಹಣಾ ಸಮಿತಿಗಳು ಹಾಗೂ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುತ್ತವೆ. ಶಾಲೆಯೊಂದು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಸ್ಪಷ್ಟ ಪರಿಕಲ್ಪನೆ ಶಾಲೆಯೊಂದಿಗೆ ಸಂಬಂಧವಿರುವ ಸಮುದಾಯಕ್ಕೂ ಅರಿವಾಗುತ್ತದೆ. ಹಾಗೇ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೈಕ್ಷಣಿಕ ಯೋಜನೆಯನ್ನು ತಯಾರಿಸುವ ಕೆಲಸದಲ್ಲೂ ಡಯಟ್ನ ಪಾಲಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಸ್ವಾತಂತ್ರ್ಯ ಡಯಟ್ಗಳಿಗಿದೆ. ತಮ್ಮ ಯೋಜನೆಗಳ ಫಲವನ್ನು ಅರಿಯಲು ಬೇಕಾಗಿರುವ ಸಂಶೋಧನೆಗಳನ್ನೂ ಇಲ್ಲಿ ಅವು ನಡೆಸುತ್ತವೆ. ಉದಾಹರಣೆಗೆ ತ್ರಿಶ್ಶೂರ್ ಡಯಟ್ನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯುವುದಕ್ಕೆ ಇಪ್ಪತ್ತು ಭಿನ್ನ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಅಂದರೆ ಫಲಿತಾಂಶವನ್ನು ಕೇವಲ ಭೌತಿಕವಾದ ಅಂಕಿ–ಅಂಶಗಳಿಗೆ ಸೀಮಿತಗೊಳಿಸದೆ, ಅದರ ಗುಣಮಟ್ಟವನ್ನು ಗ್ರಹಿಸುವ ಪ್ರಯತ್ನ ಜಿಲ್ಲಾ ಮಟ್ಟದಲ್ಲೇ ನಡೆಯುವುದು ವಿಶೇಷ. ಈ ಬಗೆಯ ಕೆಲಸಗಳನ್ನು ದೇಶದ ಯಾವುದೇ ಡಯಟ್ ಮಾಡಬಹುದು. ಆದರೆ ಕೇರಳದಲ್ಲಿ ಮಾತ್ರ ಇದೇಕೆ ಇಷ್ಟೊಂದು ಪರಿಣಾಮಕಾರಿಯಾಗಿದೆ? ಈ ಪ್ರಶ್ನೆಗಿರುವ ಉತ್ತರ ಕೇರಳ ಸರ್ಕಾರವು ಡಯಟ್ ಮತ್ತು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳನ್ನು ನಿರ್ವಹಿಸುತ್ತಿರುವ ವಿಧಾನದಲ್ಲಿ ಅಡಗಿದೆ. ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಪನ್ಮೂಲದ ಕೊರತೆ ಇಲ್ಲದಂತೆ ಸರ್ಕಾರ ನೋಡಿಕೊಳ್ಳುತ್ತದೆ.
ಪ್ರತಿ ವರ್ಷ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಜಿಲ್ಲೆಯ ಎಇಒ, ಬ್ಲಾಕ್ ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಅಧಿಕಾರಿಗಳನ್ನು ಒಳಗೊಂಡು ಡಯಟ್ ಯೋಜನೆ ರೂಪಿಸಿ ಅದಕ್ಕೆ ವೆಚ್ಚವಾಗುವ ಹಣದ ಅಂದಾಜನ್ನು ನೀಡುತ್ತದೆ. ರಾಜ್ಯದ ಎಲ್ಲ ಡಯಟ್ಗಳ ಯೋಜನೆಯನ್ನು ಕ್ರೋಡೀಕರಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿಕೊಡುವುದು ರಾಜ್ಯ ಸರ್ಕಾರದ ಕೆಲಸ. ಕೇರಳ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ಸರ್ಕಾರ ಒದಗಿಸುವ ಸಂಪನ್ಮೂಲಕ್ಕಾಗಿ ಕಾಯದೆ ಯೋಜನೆಗಳಿಗೆ ಅಗತ್ಯವಿರುವ ಹಣವನ್ನು ಕೇಂದ್ರದಿಂದ ಹಸಿರು ನಿಶಾನೆ ಸಿಕ್ಕ ಕೂಡಲೇ ಮಂಜೂರು ಮಾಡಿಬಿಡುತ್ತದೆ. ಆದ್ದರಿಂದ ಯೋಜನೆಗಳು ಸರಿಯಾದ ಸಮಯಕ್ಕೆ ಜಾರಿಯಾಗುತ್ತವೆ. ಆದರೆ ಬಹುತೇಕ ರಾಜ್ಯಗಳಲ್ಲಿ ಈ ಬಗೆಯ ವ್ಯವಸ್ಥೆಯಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಣ ಮಂಜೂರು ಮಾಡುವುದಕ್ಕೆ ಕಾಯುವ ಪ್ರಕ್ರಿಯೆಯಲ್ಲೇ ಯೋಜನೆಗಳೆಲ್ಲವೂ ದೂಳು ತಿನ್ನುತ್ತವೆ. ಆರ್ಥಿಕ ವರ್ಷದ ಕೊನೆಯಲ್ಲಿ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳುವ ಧಾವಂತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ.
ಮೊದಲೇ ಹೇಳಿದಂತೆ ಕೇರಳದ ಶೈಕ್ಷಣಿಕ ಕ್ಷೇತ್ರವೂ ನಮ್ಮಂತೆಯೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಉತ್ಸಾಹ ಕಳೆದುಕೊಳ್ಳದೆ ಸವಾಲನ್ನು ಎದುರಿಸುವ ತಂತ್ರಗಳನ್ನು ರೂಪಿಸುತ್ತಾ ಮುಂದಕ್ಕೆ ಸಾಗುತ್ತಿದೆ. ಬಹುಮುಖ್ಯವಾಗಿ ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆಯನ್ನು ಹೆಚ್ಚಿಸುತ್ತಿದೆ. ಎಲ್ಲ ಭಾಗೀದಾರರು, ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳೆಲ್ಲವೂ ಕೈಜೋಡಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸಿಕೊಡಲು ಕಾರ್ಯೋನ್ಮುಖವಾಗಿವೆ. ಇದು ಕರ್ನಾಟಕದ ಶಿಕ್ಷಣ ಇಲಾಖೆಗೂ ಮಾದರಿಯಾಗಬೇಕಾಗಿದೆ. ಆಗ ನಮ್ಮಲ್ಲೂ ನೂರಾರು ಸಂಖ್ಯೆಯ ಮಕ್ಕಳು ಮತ್ತು ಅದಕ್ಕೆ ಅನುಗುಣವಾದ ಶಿಕ್ಷಕರಿರುವ ಪ್ರಾಥಮಿಕ ಶಾಲೆಗಳು ಅರಳುತ್ತವೆ.
(ಲೇಖಕರು ಅಜೀಂ ಪ್ರೇಮ್ಜಿ ಫೌಂಡೇಶನ್ನ ‘ಕರ್ನಾಟಕ ರಾಜ್ಯ ಸಂಸ್ಥೆ’ಯ ಮುಖ್ಯಸ್ಥರು)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.