ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿಗೆ ಅನುದಾನ: ಪಾರದರ್ಶಕತೆ ಕೊರತೆ

ಐದು ವರ್ಷಗಳಲ್ಲಿ 855 ಕೋಟಿ ರೂಪಾಯಿಗಳಷ್ಟು ಜನರ ತೆರಿಗೆ ಹಣವನ್ನು ಇಬ್ಬರು ಮುಖ್ಯಮಂತ್ರಿಗಳು ಮಠಗಳಿಗೆ ನೀಡಿದ್ದಾರೆ
Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬಿಜೆಪಿ ಸರ್ಕಾರ ಆಚರಣೆಗೆ ತಂದ ಹತ್ತಾರು ಜನದ್ರೋಹಿ ಆಚರಣೆಗಳ ಸಾಲಿಗೆ ಮಠಮಂದಿರಗಳಿಗೆ ಜನರ ತೆರಿಗೆಯ ಹಣವನ್ನು ಬಾಚಿಕೊಡುತ್ತಿರುವ ಪ್ರಸಂಗವೂ ಸೇರಿದೆ. ಬಿಜೆಪಿ ಪಕ್ಷದ ಜನವಿಮುಖತೆ ಮತ್ತು ರಾಜಕೀಯ ಕುಟಿಲತೆಗಳ ಅರಿವಿರುವವರಿಗೆ ಇದು ನಿರೀಕ್ಷಿತವೇ ಹೊರತು ಆಶ್ಚರ್ಯದ ವಿಷಯವೇನೂ ಅಲ್ಲ.

ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ತಮ್ಮ ಬೆವರಿಳಿಸಿ ಗಳಿಸಿದ ಹಣದಲ್ಲೋ, ಪಕ್ಷದ ಪಾರ್ಟಿ ಫಂಡಿನಲ್ಲೋ ಅಥವಾ ಪಂಚತಾರಾ ಹೋಟೆಲುಗಳಲ್ಲಿ ನಡೆಸುವ ತಮ್ಮ ಹೈಫೈ ಸಭೆಗಳಿಗೆ ಖರ್ಚು ಮಾಡುವ ಹಣದಲ್ಲೋ ಮಠಮಂದಿರಗಳಿಗೆ ದೇಣಿಗೆ -ಅನುದಾನ ಕೊಟ್ಟಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ. ಆದರೆ ಇಲ್ಲಿ ಜನರ ತೆರಿಗೆಯ ಹಣವಾಗಿರುವ ಒಟ್ಟು 155 ಕೋಟಿ ರೂಪಾಯಿಗಳಷ್ಟು ಬೃಹತ್ ಅನುದಾನವನ್ನು ಪಿತ್ರಾರ್ಜಿತ ಆಸ್ತಿಯೆಂಬಂತೆ ಕಂಡ ಕಂಡ ಮಠಗಳಿಗೆ ಕೊಡುವುದು ಜನದ್ರೋಹವಲ್ಲದೆ ಮತ್ತೇನೂ ಆಗುವುದಿಲ್ಲ.

`ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದು ತಪ್ಪೇನೂ ಅಲ್ಲ, ಈ ಸಂಬಂಧದ ಯಾವ ಟೀಕೆಗೂ ಸೊಪ್ಪು ಹಾಕುವುದಿಲ್ಲ' ಎಂಬ ಹೇಳಿಕೆಯೊಂದನ್ನು ರಾಜ್ಯದ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಈ ಲೆಕ್ಕದಲ್ಲಿ ನೋಡಿದರೆ ಸರ್ಕಾರವೊಂದು ಮಾಡಬೇಕಿದ್ದ ಶಿಕ್ಷಣ - ದಾಸೋಹದ ಕೆಲಸವನ್ನು ಮಠಗಳು ಮಾಡುತ್ತಿವೆ ಎಂದಾದಲ್ಲಿ ಆ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲವೆಂದರ್ಥವೇ?

ಶಿಕ್ಷಣ, ಸಾಮಾಜಿಕ ಕಲ್ಯಾಣ, ಸಮಾನತೆ, ಜನಾಭಿವೃದ್ಧಿಯ ಜವಾಬ್ದಾರಿಯನ್ನು ಮಠಗಳೇ ಅಚ್ಚುಕಟ್ಟಾಗಿ ಮಾಡುತ್ತಿವೆ ಎಂದಾದಲ್ಲಿ ಈ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸಲು ರಚಿಸಲಾಗಿರುವ ಸರ್ಕಾರಿ ಇಲಾಖೆಗಳನ್ನು ಅಧಿಕಾರಿವೃಂದ - ಕಚೇರಿಗಳ ಸಮೇತ ಮಠಗಳಿಗೇ ಹೊರಗುತ್ತಿಗೆ ನೀಡಬಹುದಲ್ಲ? ಸರ್ಕಾರಕ್ಕೂ ಯೋಜನೆ ಅನುಷ್ಠಾನ, ಸಿಬ್ಬಂದಿಗೆ ಸಂಬಳದ ಖರ್ಚು, ಮಠಗಳಿಗೂ ಅನುದಾನದ ಖರ್ಚು ಎಂಬ ಎರಡೆರಡು ಖರ್ಚುಗಳಿಗೆ ತಡೆಯಾದರೂ ಬೀಳುತ್ತದೆ.

ಇನ್ನು ಕೆಜೆಪಿ ಪಕ್ಷದ ನಾಯಕರು, ತಾವು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಮೂರು ವರ್ಷಗಳಲ್ಲಿ  700 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇನೆ, ಕೆಜೆಪಿ ಅಧಿಕಾರಕ್ಕೆ ಬಂದರೆ ಸಾವಿರಾರು ಕೋಟಿ ರೂ ಕೊಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಒಟ್ಟು 5 ವರ್ಷಗಳಲ್ಲಿ 855 ಕೋಟಿರೂಪಾಯಿಗಳಷ್ಟು ಜನರ ತೆರಿಗೆ ಹಣವನ್ನು ಇಬ್ಬರು ಮುಖ್ಯಮಂತ್ರಿಗಳು ರಾಜ್ಯದ ಮಠಗಳಿಗೆ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆರಿಸಿ ಕಳಿಸಿದ ಜನಸಾಮಾನ್ಯರನ್ನು ಒಂದು ಮಾತು ಕೇಳುವ, ವಿರೋಧಪಕ್ಷದ ಪ್ರತಿರೋಧಕ್ಕೆ ಬೆಲೆ ಕೊಡುವ ಸಂಯಮವನ್ನೂ ಪ್ರದರ್ಶಿಸಿಲ್ಲ.  

ಇಷ್ಟಕ್ಕೂ ಹೀಗೆ ನಡೆಯುವ ಜನರ ತೆರಿಗೆ ಹಣದ ದರೋಡೆಯ ಪ್ರಕ್ರಿಯೆಯಾದರೂ ಪಾರದರ್ಶಕವಾಗಿ ನಡೆಯುತ್ತದೆಯೇ ಅಂದರೆ ಅದೂ ಇಲ್ಲ. ಈ ಕುರಿತ ಯಾವ ವಿವರಗಳೂ ಜನರಿಗೆ ಲಭ್ಯವಾಗುವುದೇ ಇಲ್ಲ. ಸರ್ಕಾರದ ಅಧೀನಕ್ಕೊಳಪಡದ ಸಂಘ-ಸಂಸ್ಥೆಗಳು ಸರ್ಕಾರದೊಟ್ಟಿಗೆ ಕೈಜೋಡಿಸಿ ಜನೋಪಯೋಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಇದೇ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ತಮ್ಮ ಯೋಜನೆಗಳು, ಅದನ್ನು ಜನರಿಗೆ ತಲುಪಿಸುವ ವಿಧಾನ ಅದಕ್ಕೆ ಬೇಕಿರುವ ಖರ್ಚುವೆಚ್ಚದ ಅಂದಾಜು, ಅದನ್ನು ಖರ್ಚು ಮಾಡಿದ್ದರ ಬಗ್ಗೆ ಸರ್ಕಾರಕ್ಕೆ ಲೆಕ್ಕ ಒಪ್ಪಿಸುವುದು ಸೇರಿದಂತೆ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಬೇಕು.

ಆದರೆ ಮಠಮಂದಿರಗಳ ವಿಷಯಕ್ಕೆ ಬಂದರೆ ಇದ್ಯಾವುದೂ ಇಲ್ಲ. ಕಳೆದ ವರ್ಷ ಅದೇ ಮಠಕ್ಕೆ ಕೊಟ್ಟ ಹಣದ ವಿನಿಯೋಗ ಯಾವ ಯಾವ ಜನೋಪಯೋಗಿ ಕಾರ್ಯಕ್ಕೆ ಬಳಕೆಯಾಗಿದೆ, ಈ ಕುರಿತ ಲೆಕ್ಕಪತ್ರಗಳ ತಪಾಸಣೆ, ಅನುದಾನ ದುರುಪಯೋಗಪಡಿಸಿಕೊಂಡ ಮಠಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತಹ ಯಾವ ಅಧಿಕೃತ ಮಾಪನಗಳೂ ಈ ಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇಲ್ಲ. 

885 ಕೋಟಿ ರೂಪಾಯಿಗಳನ್ನು ಮಠಗಳಿಗೆ ಸುರಿದು ಕುಳಿತಿರುವ ಬಿಜೆಪಿ ಸರ್ಕಾರವು ಮಠಮಂದಿರಗಳ ಅಭಿವೃದ್ಧಿ ಮತ್ತು ಉಸ್ತುವಾರಿಗಾಗಿ ಮುಜರಾಯಿ ಇಲಾಖೆ, ಅದಕ್ಕೊಬ್ಬ ಸಚಿವ, ಅದಕ್ಕೊಂದು ಅಧಿಕಾರಿಗಳ ವೃಂದ, ವಾರ್ಷಿಕ ಅನುದಾನದ ಮೂಲಕವೂ ಮಠ-ದೇಗುಲಗಳಿಗೆ ಹಣ ಸುರಿಯುತ್ತಿದೆ. ಬಜೆಟ್‌ನಲ್ಲೇ ಕೋಟ್ಯಂತರ ರೂಪಾಯಿಗಳನ್ನು ಮಠಮಂದಿರಗಳ ಅಭಿವೃದ್ಧಿಗೆ ವಿನಿಯೋಗಿಸುವುದಾದರೆ ಮುಜರಾಯಿ ಇಲಾಖೆಯನ್ನು ಯಾವ ಸಂಪತ್ತಿಗೆ ರಚಿಸಲಾಗಿದೆ ಮತ್ತು ಈ ಇಲಾಖೆಗೇಕೆ ಮತ್ತೊಮ್ಮೆ ವಾರ್ಷಿಕ ಅನುದಾನವೆಂದು ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ ಎಂಬುದೇ ಅರ್ಥವಾಗುವುದಿಲ್ಲ.

ಮಠಗಳಿಗೆ ಅನುದಾನ ನೀಡಿಕೆಯ ಪ್ರಸಂಗದಲ್ಲಿ ಭಾಗಿಯಾಗಿರುವ ಮಠಗಳ ಜೊತೆ ಗುರುತಿಸಿಕೊಳ್ಳಲು ಇಚ್ಛಿಸದ ಬೆರಳೆಣಿಕೆಯಷ್ಟು ಮಠಗಳೂ ರಾಜ್ಯದಲ್ಲಿರುವುದು ಆಶಾದಾಯಕ ವಿಷಯ. ಕೆಲವು ಮಠಗಳು ಈ  ತೆರಿಗೆ ಹಣದ ದರೋಡೆಯ ಕ್ರಿಯೆಯನ್ನು ಪ್ರತಿಭಟಿಸಿ ಸರ್ಕಾರದ ಅನುದಾನವನ್ನು ತಿರಸ್ಕರಿಸಿರುವುದು ಆ ಮಠಗಳ ಮೇಲೆ ಜನರಲ್ಲಿ ಗೌರವವನ್ನು ಹುಟ್ಟಿಸಿದೆ.

ರಾಜ್ಯದ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ಮಾಡಿ ಶಿಫಾರಸ್ಸುಗಳನ್ನು ನೀಡಲು ಬಿಜೆಪಿ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಒಂದು ವರ್ಷ ಅಧ್ಯಯನದ ನಂತರ ರಾಮಾ ಜೋಯಿಸ ಸಮಿತಿ ಮಠಗಳನ್ನೂ ಸಹ ಸರ್ಕಾರದ `ಧಾರ್ಮಿಕ ದತ್ತಿ ಕಾಯ್ದೆ'ಯ ಪರಿಧಿಗೆ ತೆಗೆದುಕೊಳ್ಳಲು  ಶಿಫಾರಸ್ಸು ನೀಡಿತ್ತು.

ತಾನೇ ರಚಿಸಿದ ಸಮಿತಿಯ ಶಿಫಾರಸ್ಸಿಗೇ ಬೆಲೆ ಕೊಡದ ಬಿಜೆಪಿ ಸರ್ಕಾರವು ಆ  ಮಠಗಳ ಕೇಂದ್ರೀಕರಣ ಶಿಫಾರಸ್ಸನ್ನು ಮಾತ್ರ ಬೇಕೆಂತಲೇ ಹೊರಗಿಟ್ಟು ಉಳಿದ ಶಿಫಾರಸ್ಸುಗಳನ್ನು ಮಾತ್ರ ಕಾಯ್ದೆ ತಿದ್ದುಪಡಿಗೆ ಗಣನೆಗೆ ತೆಗೆದುಕೊಂಡಿತ್ತು. ಹೀಗೆ ಮಠಗಳನ್ನು ಜನಸ್ವಾಯತ್ತ ಸರ್ಕಾರದ ಆಡಳಿತಕ್ಕೆ ಸಿಗದಂತೆ ಪ್ರತ್ಯೇಕ ಖಾಸಗಿಸಂಸ್ಥೆಯಾಗಿಯೇ ಉಳಿಸಿಕೊಂಡು ಜಾತ್ಯಾಧಾರಿತ ಮತ ಸಂಗ್ರಹಾಗಾರಗಳಂತೆ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಯತ್ನ ಇಲ್ಲಿದೆ. 

ಇದೇ ಮಠಾನುದಾನದ ಹಣದಲ್ಲಿ ಅರ್ಧದಷ್ಟು ರೈತರ ಸಾಲ ಮನ್ನಾ ಮಾಡಬಹುದಿತ್ತು. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಬಡವರಿಗೆ 2 ರೂಪಾಯಿಗೆ ಅಕ್ಕಿ ಕೊಡುವ ಸುಳ್ಳು ಭರವಸೆಯನ್ನು ಈಡೇರಿಸಬಹುದಿತ್ತು. 2 ವರ್ಷದಿಂದ ಸರ್ಕಾರ ಕೊಡದ ಬಾಕಿಸಂಬಳಕ್ಕಾಗಿ ಗುಲ್ಬರ್ಗದಲ್ಲಿ ಮುಷ್ಕರಕ್ಕಿಳಿದ ಬೀದಿ ಚರಂಡಿ ಗುಡಿಸುವ ಗುತ್ತಿಗೆ ಪೌರಕಾರ್ಮಿಕರನ್ನು ತಿಂಗಳಾನುಗಟ್ಟಲೆ ಜೈಲಿಗಟ್ಟಿ ಅರ್ಥವಾಗದ ಕೇಸುಗಳನ್ನು ಹಾಕಿದ್ದರಲ್ಲ. ಅಂತಹ ಸಾವಿರಾರು ಬಡವರಿಗೆ ಕನಿಷ್ಠವೇತನ ಕೊಟ್ಟು ಕಾಯಂ ಮಾಡಬಹುದಿತ್ತು.

ಯಾವುದು ಜನಪರ, ಯಾವುದು ಜನವಿರೋಧಿ ಎಂಬ ಕನಿಷ್ಠಪ್ರಜ್ಞೆ ಆಳುವ ಸರ್ಕಾರಕ್ಕೆ ಇಲ್ಲದಿದ್ದರೆ ಹೋಗಲಿ.  ಸಾಮಾನ್ಯಜನರ ತೆರಿಗೆಹಣವನ್ನು ತೆಗೆದುಕೊಳ್ಳುತ್ತಿರುವ ಮಠಗಳಾದರೂ ಈ ಬಗ್ಗೆ ಆಲೋಚಿಸಬೇಡವೆ?  
                
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT