ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ: ವಲಸೆ ಧರ್ಮವಲ್ಲ, ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ

Last Updated 1 ಮೇ 2014, 19:30 IST
ಅಕ್ಷರ ಗಾತ್ರ

‘ವಚನ ಚಳವಳಿಯ ಗುರಿ: ಪರ್ಯಾಯ ಸಂಸ್ಕೃತಿ ನಿರ್ಮಾಣ-’, ಈ ವಿಚಾರ ಸಂಕಿರಣದಲ್ಲಿ ನಾನು ಹೇಳಿದ್ದೇ ಬೇರೆ; ಡಾ.ಹಂಪನಾ ‘ಪ್ರಜಾವಾಣಿ’ಯ (ಏ.೨೫ ) ಮೂಲಕ ನನಗೆ ಉತ್ತರಿಸಿದ್ದೇ ಬೇರೆ. ಇದು ವಿಷಯಾಂತರ­ವಷ್ಟೇ ಅಲ್ಲ; ಓದುಗರನ್ನು ದಾರಿ ತಪ್ಪಿಸುವ ಜಾಣ ಬರವಣಿಗೆ­ಯಂತೆ, ಅವರ ಭಾವನೆಯನ್ನು ಪ್ರಚೋದಿಸುವ ಅತಿರಂಜಿತ ಲೇಖನವೂ ಆಗಿದೆ.

ಅಶೋಕಪೂರ್ವದ ಕರ್ನಾಟಕದಲ್ಲಿ ಬೇಟೆ ವೃತ್ತಿಯ ಬೇಡ, ಕುರಿಕಾಯುವ ಕುರುಬ, ದೋಣಿ ನಡೆಸುವ ಅಂಬಿಗ ಇತ್ಯಾದಿ ವೃತ್ತಿಮೂಲ ಜಾತಿಗಳಿದ್ದವು. ಈ ಸಂದರ್ಭದಲ್ಲಿ ಮತ್ತು ಆಮೇಲೆ ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, (ಕಾಶ್ಮೀರ) ಶೈವಧರ್ಮಗಳು ಇಲ್ಲಿಗೆ ವಲಸೆ ಬಂದವು. ಈ ವಲಸೆ ಧರ್ಮಗಳು ಇಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಲು ನಡೆಸಿದ ಪರಸ್ಪರ ಹೋರಾಟದಲ್ಲಿ ಮೊದಲು ನಾಶವಾದುದು ಬೌದ್ಧ­ಧರ್ಮ. ಬಳಿಕ ಮಿಕ್ಕ ಮೂರರಲ್ಲಿ ವೈದಿಕ, ಶೈವಗಳು ಕ್ರಮೇಣ ಜೈನವನ್ನು ನಿಯಂತ್ರಿಸಿದವು. ಅಂದರೆ ವೈದಿಕವು ಬಸದಿಗಳನ್ನು ಬ್ರಹ್ಮಜಿನಾಲಯವಾಗಿಸುವ, ಶೈವವು(ಕಾಳಾಮುಖ ಇತ್ಯಾದಿ) ಬಸದಿಗಳನ್ನು ಎಕ್ಕೋಟಿ ಜಿನಾಲಯವಾಗಿಸುವ- ಇವೇ ಮೊದ­ಲಾದ ರೀತಿಯ ಆಕ್ರಮಣಕಾರ್ಯದಲ್ಲಿ ನಿರತವಾದವು.

ಹೀಗೆ ಜೈನರನ್ನು ಹತ್ತಿಕ್ಕಿದ ಎರಡು ಧರ್ಮಗಳಲ್ಲಿ ವೇದಪರ­ವಾದ ವೈದಿಕ ಬ್ರಾಹ್ಮಣವು, ಆಗಮಪರವಾದ ಆಗಮಿಕ ಶೈವದ ಮೇಲೆ ತನ್ನ ಪ್ರಭಾವ ಬೀರಿ, ಅದನ್ನು ಆಗಮಿಕ ಶೈವ­ಬ್ರಾಹ್ಮಣ­ವನ್ನಾಗಿಸಿತು. ಇದರ ಪರಿಣಾಮದಿಂದ ಇವರ ಆಗ­ಮ­ಗಳು ವೇದಪರ, ವೇದವಿರೋಧಿ ಪಠ್ಯಗಳಾಗಿ ಬೆಳೆದವು. ಈ ಎರಡು ಧರ್ಮಗಳಲ್ಲಿ ವೈದಿಕ ಬ್ರಾಹ್ಮಣವು ನಮ್ಮ ಮಧ್ಯೆ ಈಗಲೂ ಜೀವಂತವಿದೆ. ಆದರೆ ಆಗಮಿಕ ಶೈವಬ್ರಾಹ್ಮಣ ಮಾತ್ರ ಶಿವದ್ವಿಜ ಲಿಂಗಿಬ್ರಾಹ್ಮಣ ಹೆಸರುಗಳೊಂದಿಗೆ ಬೆಳೆದು, ಕಡ್ಡಾಯವಾಗಿದ್ದ ಜನಿವಾರ ತ್ಯಜಿಸಿ, ಐಚ್ಛಿಕವಾಗಿದ್ದ ಸ್ಥಾವರ­ಲಿಂಗ ಅರ್ಥದ ಲಿಂಗಧಾರಣೆಯನ್ನು ಕಡ್ಡಾಯಗೊಳಿಸಿ­ಕೊಂಡು, ಇಂದಿನ ವೀರಶೈವ ಪಂಚಾಚಾರ್ಯಪೀಠನಿಷ್ಠ ಜಂಗಮಸಮಾಜವಾಗಿ ಪರಿವರ್ತನೆಗೊಂಡಿತು.

ಮೇಲೆ ಹೇಳಿದ ಈ ಮೂರೂ ವಲಸೆ ಧರ್ಮಗಳು(ವೈದಿಕ, ಶೈವ, ಜೈನ) ನಮ್ಮ ನೆಲದ ಮೇಲೆ ತಮ್ಮ ತಮ್ಮ ದೇವತೆಗಳ- ತೀರ್ಥಂಕರರ ವಿಗ್ರಹ ಸ್ಥಾಪಿಸಿ, ದೇವಾಲಯ-–ಬಸದಿ ನಿರ್ಮಿಸಿ, ಅವುಗಳ ಒಳಹೊರಗೆ ತಮ್ಮ ಭಾರತ-– ರಾಮಾಯಣ-, ಜೈನಪುರಾಣ-, ಶೈವಪುರಾಣೋಕ್ತ ಘಟನೆಗಳ ಶಿಲ್ಪವನ್ನು ಕಂಡರಿಸಿದವು. ಈ ಧರ್ಮಗಳ ಶ್ರೇಷ್ಠತೆಯ ವ್ಯಸನಕ್ಕೊಳಗಾದ ಸ್ಥಳೀಯ ಕನ್ನಡಿಗರು ಅವುಗಳ ದೇವಾ­ಲಯ–ಬಸದಿಗಳ ನಿರ್ಮಾಣ, ನಿರ್ವಹಣೆ­ಗಳಿಗಾಗಿ ಉದ್ದಕ್ಕೂ ದುಡಿದರು. ತಮ್ಮನ್ನು ಮುಟ್ಟಿಸಿಕೊಳ್ಳದಿದ್ದರೂ ಅವರ ಅರ್ಚಕ­ರಿಗೆ ದಾನ, ಆಚಾರ್ಯರಿಗೆ ದಕ್ಷಿಣೆ ನೀಡಿ ಹುಸಿ ಧನ್ಯತಾಭಾವ ತಾಳಿದರು.

ಇದಕ್ಕಿಂತ ಮಿಗಿಲಾಗಿ, ಈ ಮೂರೂ ಧರ್ಮಗಳು ನಿರ್ಮಿಸಿದ್ದ ವರ್ಣವ್ಯವಸ್ಥೆ­ಯಿಂದಾಗಿ (೯ನೇ ಶತಮಾನದ ಜೈನ ಜಿನಸೇನಾಚಾರ್ಯರ ಪೂರ್ವಪುರಾಣ­ದಲ್ಲಿ ವರ್ಣವ್ಯವಸ್ಥೆಯ ದಾಖಲೆಯಿದೆ) ಕಾಯಕಜೀವಿಗಳು,-ಶೂದ್ರವರ್ಗಗಳು ಶೋಷಣೆಗೆ ಗುರಿಯಾಗಿ­ದ್ದವು. ಪ್ರಭುವರ್ಗ ಸೊಕ್ಕಿ-, ಪ್ರಜಾವರ್ಗ ಸೊರಗಿದ್ದಿತು. ಮಹಿಳೆಯು ಧಾರ್ಮಿಕ ವಿಧಿವಿಧಾನಗಳಿಂದ, ಮೋಕ್ಷದಿಂದ ವಂಚಿತಳಾಗಿದ್ದಳು.

ಈ ಬಗೆಯ ತಮ್ಮ ಸಂಸ್ಕೃತಿಯ ಪ್ರಸಾರಕ್ಕಾಗಿ ಇವರು ನಮ್ಮ ಭಾಷೆಯನ್ನು ಬಳಸಿಕೊಂಡು, ಉತ್ತರ ಭಾರತದ ಕೃತಿಗಳನ್ನು  (ರಾಮಾಯಣ, ಮಹಾಭಾರತ, ಜೈನಪುರಾಣ, ಕರ್ಣಾಟ ಕಾದಂಬರಿ, ಕರ್ಣಾಟ ಪಂಚತಂತ್ರ) ಸೃಜನಶೀಲವಾಗಿ ಅನು­ವಾದಿ­ಸಿ­ದರು. ಇವೇ ಮೊದಲಾದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಚಟುವಟಿಕೆಗಳಿಂದಾಗಿ ದೇವರೆಂದರೆ ಉತ್ತರಭಾರತದವು, ಪುರಾಣಪುರುಷರೆಂದರೆ ಉತ್ತರಭಾರತ­ದವರು, ಸಾಮಾಜಿಕ ನೀತಿಯೆಂದರೆ ಉತ್ತರಭಾರತೀಯ­ರದು, ಸಾಹಿತ್ಯವೆಂದರೆ ಉತ್ತರ ಭಾರತದ್ದು ಎಂಬ ಭ್ರಮೆ ಕನ್ನಡಿ­ಗ­ರಲ್ಲಿ ಬೆಳೆಯುವಂತೆ ಮಾಡಿದರು.

ಈ ಧರ್ಮ­ಗಳಿಂದಾಗಿ ನಮ್ಮ ಅರಿವು ವಿಸ್ತಾರವಾಗಿರಬಹುದಾದರೂ ಅಸ್ಮಿತೆ ನಾಶವಾಗುತ್ತ ಬಂದಿತು. ಅಸ್ಮಿತೆ ನಾಶಮಾಡಿ ಬರುವ ಅರಿವು ಎಷ್ಟೋ ದೊಡ್ಡದಿದ್ದರೂ ಅದು ಸ್ವೀಕಾರಯೋಗ್ಯವಲ್ಲ­ವೆಂದೇ ಹೇಳಬೇಕು. ಈ ಸತ್ಯ ಗೊತ್ತಾಗದ ಕಾರಣ, ಕನ್ನಡಿಗರು ದಿನೇ ದಿನೇ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಭೌತಿಕವಾಗಿ,-ಮಾನಸಿಕವಾಗಿ ಉತ್ತರಭಾರತದ ಗುಲಾಮರಾಗುತ್ತ ಬಂದರು (ಇದು ಈಗಲೂ ಮುಂದುವರಿದಿದೆ). ಇಂಥ ಅನ್ಯಾ­ಯದ ಅತಿರೇಕ ಸಂದರ್ಭದಲ್ಲಿ ಸ್ಥಳೀಯ ದುಡಿಯುವ ವರ್ಗ­ಗಳಾದ ಕುರುಬ,-ಅಂಬಿಗ,-ಸಮಗಾರ-,ಮಾದಿಗ,-ಡೋಹರ,-ಪಾಂಚಾಳ, ಅಗಸ,- ಒಕ್ಕಲಿಗ ಮೊದ­ಲಾದ ಸಮುದಾಯದ ಗಂಡು-ಹೆಣ್ಣು­ಗಳಲ್ಲಿ ಅಸ್ಮಿತೆಯನ್ನು ಜಾಗೃತಗೊಳಿಸಿ, ಉತ್ತರಭಾರತದ ಧಾರ್ಮಿಕ ಯಜ­ಮಾನ ಸಂಸ್ಕೃತಿಯ ವಿರುದ್ಧ ಬಸವಣ್ಣ ಶರಣ ಚಳವಳಿ ಹೂಡಿದನು.

ಇದರ ಪರಿಣಾಮವಾಗಿ, ದೇವತೆ­ಗಳಿಲ್ಲ ದೇವರಿದ್ದಾನೆ, ಜಾತಿಗಳಿಲ್ಲ ವೃತ್ತಿ­(ಕಾಯಕ)ಗಳಿವೆ. ಸ್ತ್ರೀಜಾತಿ ಪುರುಷ­ಜಾತಿ­ಗಳಿಲ್ಲ ಮನುಷ್ಯಜಾತಿ ಇದೆ, ವ್ಯಕ್ತಿ­ವಾದಿ ಸೋಹಂ ಪೂರ್ಣಧರ್ಮವಲ್ಲ ಸಮಾಜ­ವಾದಿ ದಾಸೋಹಂ ಪೂರ್ಣಧರ್ಮ. ಇವೇ ಮೊದ­ಲಾದ ಪರ್ಯಾಯ ಸಿದ್ಧಾಂತಗಳು ಸಮಾಜದಲ್ಲಿ ಸೃಷ್ಟಿ­ಯಾ­ದವು. ಇದರ ಫಲವಾಗಿ ಲಿಂಗಾಯತವೆಂಬ ಹೊಸ ಧರ್ಮ ಈ ನಾಡಿನಲ್ಲಿ ಆಕಾರ ಪಡೆಯಿತು. ಹೀಗಾಗಿ ಲಿಂಗಾಯತವೆನ್ನು­ವುದು ಉತ್ತರಭಾರತದ ವಲಸೆ ಧರ್ಮಗಳ ವಿರುದ್ಧ ಎಲ್ಲ ಪಂಗಡಗಳ ಕನ್ನಡಿಗರು ಸೇರಿ ಕರ್ನಾಟಕದಲ್ಲಿ ಸೃಷ್ಟಿಸಿದ ಮೊದಲ ಸ್ಥಳೀಯ ಧರ್ಮವೆನಿಸಿತು.

ಇದು ನನ್ನ ವಾದ. ಇದಕ್ಕೆ ಸರಿಯಾಗಿ ಉತ್ತರಿಸುವುದನ್ನು ಬಿಟ್ಟು, ಲಿಂಗಾಯತರು ಜೈನರನ್ನು ಹಿಂಸಿಸಿದರೆಂದು ಓದು­ಗರಲ್ಲಿ ಜೈನರ ಬಗ್ಗೆ ಕನಿಕರ ಹುಟ್ಟುವಂತೆ ಹಂಪನಾ ಬರೆದಿ­ದ್ದಾರೆ. ಜೈನರು ನಾಶವಾದದ್ದು ನಿಜ. ಈ ನಾಶಕಾರ್ಯ ಮಾಡಿ­ದ­ವರು ಲಿಂಗಾಯತರಲ್ಲ, (ವೀರ)ಶೈವರು. ೧೨ನೇ ಶತಮಾನದ ಬಳಿಕ ಲಿಂಗಾಯತದಲ್ಲಿ ಈ (ವೀರ)ಶೈವ ಸೇರಿ­ಕೊಂಡುದನ್ನು ಗಮನಿಸದೆ, ಬಸವಾದಿ ಲಿಂಗಾಯತರೇ ಜೈನರ ಅಳಿಗಾಲಕ್ಕೆ ಕಾರಣರಾದರೆಂದು ಡಂಗುರ ಭಾಷೆ ಬಳಸಿ ಬರೆ­ಯುವುದು ‘ದಯವೇ ಧರ್ಮದ ಮೂಲ’ವೆಂಬ ಸಿದ್ಧಾಂತದ ಶರಣಧರ್ಮಕ್ಕೆ ಮಾಡಿದ ಅನ್ಯಾಯವಾಗಿದೆ.

ಶರಣರದು ದೇವಾಲಯ(ಬಸದಿ)ವನ್ನು ನಿರ್ಮಾಣ­ಮಾಡುವ, ಇಲ್ಲವೆ ನಾಶಮಾಡುವ ಧರ್ಮವಲ್ಲ. ದೇವಾ­ಲಯ­ತತ್ವವನ್ನು ನಿರಾಕರಿಸಿ, ದೇಹದೇವಾಲಯ ತತ್ವವನ್ನು ಎತ್ತಿ ಹಿಡಿಯುವ ಧರ್ಮವಾಗಿದೆ. ಮೇಲಾಗಿ ಬಲಿಷ್ಠ ರಾಜ­ವರ್ಗ-, ಪುರೋಹಿತವರ್ಗ ಪೋಷಿತ, ಬಹುಜನ ಮುಗ್ಧರ ಭಕ್ತಿ­ಕೋಟೆ­ಯೊಳಗೆ ಸುರಕ್ಷಿತವಾಗಿದ್ದ ದೇವಾಲಯಗಳನ್ನು ಮಾದರ ಚೆನ್ನಯ್ಯ, ಕುರುಬ ಗೊಲ್ಲಾಳ, ಒಕ್ಕಲಿಗ ಮುದ್ದಯ್ಯ ಮೊದಲಾದ ತಳವರ್ಗದ ಸಾತ್ವಿಕ ಶರಣರು ಹಾರಿ -ಗುದ್ದಲಿ, ಖಡ್ಗ-ಕಠಾರಿ ಹಿಡಿದು ನಾಶಪಡಿಸಲು ಸಾಧ್ಯವೇ? ಇವರು ಕೈಯಾರೆ ನಾಶಪಡಿಸಿದರೆಂಬುದಕ್ಕೆ, ಒಂದಾದರೂ ಆಧಾರ­ವಿ­ದೇಯೇ? ಆದುದರಿಂದ (ವೀರ)ಶೈವಧರ್ಮೀಯರು ಮಾಡಿದ ಈ ಆಕ್ರಮಣವನ್ನು ಲಿಂಗಾಯತಧರ್ಮೀಯರ ತಲೆಗೆ ಕಟ್ಟುತ್ತ ಬಂದ, ಈವರೆಗಿನ ಸುಳ್ಳು ಇತಿಹಾಸವನ್ನು ಇನ್ನು ಮೇಲಾ­ದರೂ ಆಧುನಿಕ ವಿದ್ವಾಂಸರು ಕೈಬಿಡುವರೆಂದು ಆಶಿಸುತ್ತೇನೆ.

ಕೊನೆಯದಾಗಿ, ಜೈನರ ಮೇಲೆ ನಡೆದ (ವೀರ)ಶೈವರ ಆಕ್ರಮಣವನ್ನು ಕುರಿತು ಶಾಸನ-ಕಾವ್ಯಗಳ ಆಧಾರವನ್ನು ಬಳಸಿ ಡಾ. ಹಂಪನಾ ಸುದೀರ್ಘವಾಗಿ ಬರೆದಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಈ ಮೊದಲು ನಾನೂ ಒಳಗೊಂಡಂತೆ ಅನೇಕ ವಿದ್ವಾಂಸರು ಬರೆದ ವಿಷಯವಿದು (ನೋಡಿ: ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶ ಶೀರ್ಷಿಕೆಯ ನನ್ನ ಲೇಖನ. ಮಾರ್ಗ-III). ಅದೇನೇ ಇರಲಿ. ಬೌದ್ಧರು, ಜೈನರು ಅನ್ಯಮತದ ಮೇಲೆ ದಾಳಿ ದಬ್ಬಾಳಿಕೆ ಮಾಡಲಿಲ್ಲ...... ಎಂದು ಮುಂತಾಗಿ ಬರೆದು ಹಂಪನಾ ಅವರು ಬೌದ್ಧರನ್ನು ತಮ್ಮ ಪಕ್ಷಕ್ಕೆ ಬಳಸಿಕೊಳ್ಳುವ ಜಾಣತನ ತೋರಿದ್ದಾರೆ. ಆದರೆ, ಇದಕ್ಕೆ ವಿರುದ್ಧವೆನ್ನುವಂತೆ ಜೈನರೇ ಮುಂದಾಗಿ ಅನ್ಯಮತಗಳ ಮೇಲೆ ಭೌತಿಕ, ಬೌದ್ಧಿಕ ದಾಳಿಮಾಡಿದ ವಿವರಗಳು ಇತಿಹಾಸ­ದಲ್ಲಿ ಸಿಗುತ್ತವೆ. ಈ ಹಿಂಸೆಯ ವಿವರಗಳನ್ನು ಹಂಪನಾ ಅವರಂತೆ ಚಿತ್ರಿಸಿ, ಓದುಗರನ್ನು ಉದ್ರೇಕಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. 

ಹಂಪನಾ ಅವರನ್ನು ಬೆಂಬಲಿಸಿ ಡಾ. ಸಿ.ಪಿ.ಕೆ. ಒಂದೆರಡು ವಾಕ್ಯ ಬರೆದಿದ್ದಾರೆ (ಪ್ರ.ವಾ. ವಾವಾ ಏ. ೩೦). ಈ ವಿಮರ್ಶಕರ ಮಾತನ್ನು ಸಂಶೋಧಕನಾದ ನಾನು ಗಂಭೀರ­ವಾಗಿ ಪರಿಗಣಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT