ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸಫರ್’

ಚರ್ಚೆ
Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

‘ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸ­ಫರ್’ಇದು ಡಾ ಯು.ಆರ್.ಅನಂತ­ಮೂರ್ತಿ­ಯವರ ಮಾತು. ಕೇರಳದ ಕೊಟ್ಟಾ­ಯಂ ವಿವಿ­ ಕುಲಪತಿಯಾಗಿದ್ದ ಸಂದ­ರ್ಭ­ದಲ್ಲಿ­ ‘ಟ್ರೆಡಿ­ಶನ್ ಆ್ಯಂಡ್ ಕ್ರಿಯೇಟಿ­ವಿಟಿ’ ವಿಷ­ಯ­ವನ್ನು ಕುರಿತು ಮಾಡಿದ ಭಾಷ­ಣ­ದಲ್ಲಿ ಅವರು ಈ ಮಾತನ್ನು ಹೇಳಿ­ದ್ದಾರೆ. ಈ ಭಾಷಣ ಚಿನ್ಮಯ ಇಂಟ­ರ್‌­ನ್ಯಾಷ­ನಲ್ ಫೌಂಡೇ­ಶನ್ ರಿಸರ್ಚ್ ಇನ್‌­ಸ್ಟಿಟ್ಯೂಟ್ ಪ್ರಕಟಿ­ಸಿದ (೨೦೧೨) ‘ಧೀಮಹಿ’ ಹೆಸರಿನ ವಿಶೇಷ ಸಂಚಿಕೆ­ಯಲ್ಲಿ ಪ್ರಕ­ಟವಾಗಿದೆ. ಹೀಗೆ ಬಸವಣ್ಣ­ನವರನ್ನು ಅಗೌರ­ವಿಸಿ­ದವರಿಗೆ ಆಯ್ಕೆ­ ಸಮಿತಿ ಬಸವಪುರಸ್ಕಾರ ನೀಡಿ ಗೌರವಿಸಿದೆ.

ತಪ್ಪು ಮಾಡಿದವರು ತೆಪ್ಪಗಿರಬೇಕು. ಆದರೆ ತಪ್ಪು ಮಾಡಿಯೂ ಸಮರ್ಥಿಸಿ­ಕೊಳ್ಳುವುದೆಂದರೆ ಅವರು ಇನ್ನೊಂದು ತಪ್ಪು ಮಾಡಿದಂತೆಯೇ ಸರಿ. ಈ ಮಾತಿಗೆ ಉದಾಹರಣೆ, ನನ್ನ ಅಭಿ­ಪ್ರಾ­ಯಕ್ಕೆ ಆಯ್ಕೆ ಸಮಿತಿಯ ನಾಲ್ವರು  ‘ಪ್ರಜಾ­­ವಾಣಿ’ಯಲ್ಲಿ (ಮೇ. ೨೯) ಬರೆದ ಪ್ರತಿಕ್ರಿಯೆ.

*ಈ ಪುರಸ್ಕಾರದ ನಿಯಮ­ಗ­ಳನ್ನು ಕಲಬುರ್ಗಿ ಗಮನಿಸಲಿ ಎಂದು ಇವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿ­ದ್ದಾರೆ. ಆದರೆ ಇವರಿಗಿಂತ ಮೊದಲು ಈ ಆಯ್ಕೆಸಮಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ನಾನು ಈ ನಿಯಮಗಳನ್ನು ಓದಿ­ದ್ದೇನೆ. ಅಷ್ಟೇ ಅಲ್ಲ, ಈ ನಿಯಮ­ದಂತೆ ನಡೆದು­ಕೊಂಡು ಸಾಹಿತಿಯಲ್ಲದ ‘ನರ್ಮದಾ ಬಚಾವೋ’ ಹೋರಾಟ­ಗಾರ್ತಿ ಮೇಧಾ ಪಾಟ್ಕರ್ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿ­ದವನಾಗಿದ್ದೇನೆ. ಹೀಗಾಗಿ ಇವರು ನಿಯಮ­ಗಳನ್ನು ಕಲಬುರ್ಗಿ ಗಮನಿಸಲಿ ಎಂದು ಬರೆಯುವ ಬದಲು, ಇವರೇ ಸರಿಯಾಗಿ ಗಮನಿಸಿದ್ದರೆ ಈ ಹಗರಣ ಸೃಷ್ಟಿಯಾಗುತ್ತಿರಲಿಲ್ಲ.

*ಸರ್ವಧರ್ಮ ಸಮಾನತೆಗಾಗಿ ತಮ್ಮ ತನು-ಮನ ಅರ್ಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಬೇಕೆಂಬ ನಿಯಮವಿಲ್ಲಿದೆ. ಈ ವರ್ಷ ಪ್ರಶಸ್ತಿ ಪಡೆದ ಸಾಹಿತಿ ಅನಂತಮೂರ್ತಿ ಅವರು ಈ ನಿಯಮಕ್ಕೆ ಅರ್ಹರೇ? ತಕ್ಕ ಮಟ್ಟಿಗೆ ಅರ್ಹರಾಗಿದ್ದ ಕಾರಣ ಈ ಮೊದಲು ಸರಸ್ವತಿ ಗೋರಾ, ಅಬ್ದುಲ್ ಕಲಾಂ ಮೊದಲಾದವರಿಗೆ ಈ ಪುರಸ್ಕಾರ ಪ್ರಾಪ್ತವಾಗಿದ್ದಿತು. ಅನಂತ­ಮೂರ್ತಿ­-ಯವರನ್ನು ಈ ಸಾಧಕರ ಸಾಲಿನಲ್ಲಿ ಪರಿಗಣಿಸಬಹುದೆ? ಇವರ ಕಲ್ಪಿತ­ಸಾಹಿತ್ಯದಲ್ಲಿ, ಲೇಖನಗಳಲ್ಲಿ ಕೆಲ­ವೊಮ್ಮೆ ಕವಿಸಹಜ ಸಮಾಜ­ವಾದ ಹಣಿಕಿ ಹಾಕಿದ್ದರೂ, ಉದ್ದಕ್ಕೂ ಆಳುವ ವರ್ಗದ ಜೊತೆ ನಿಲ್ಲುತ್ತ ಬಂದ ಇವರ ದ್ವಂದ್ವ ನಿಲುವು ಪುರಸ್ಕಾರಕ್ಕೆ ಹೊಂದಿಕೆಯಾಗುವುದೆ?

*‘ಅನಂತಮೂರ್ತಿಯವರು ಸುತ್ತೂ­ರು­­­ಮಠ ಪ್ರಕಟಿಸಿದ ‘ವೀರಶೈವ ಧರ್ಮದರ್ಶನ’ ಕೃತಿಯ ಪ್ರಧಾನ ಸಂಪಾದಕರಾಗಿರುವರು’ ಎಂದು ಈ ನಾಲ್ವರು ಹೇಳಿದ್ದಾರೆ. ಇದು ಬೇರೆ ಬೇರೆಯವರ ಪ್ರಕಟಿತ ಲೇಖನಗಳ ಸಂಗ್ರಹ. ಇವುಗಳನ್ನು ಸಂಗ್ರಹಿಸಿ ಇಡೀ ಪುಸ್ತಕವನ್ನು ಸಿದ್ಧಪಡಿಸಿದವರು ಡಾ ಎನ್. ಎಸ್. ತಾರಾ­ನಾಥ. ಮೂರು ಪುಟದ ಪ್ರಸ್ತಾವನೆಗೆ ಅನಂತಮೂರ್ತಿ­ಯವರ ಹೆಸರಿದ್ದರೂ ಬಹುಶಃ ಅದನ್ನು ಬೇರೆಯವರು ಬರೆದಿದ್ದಾರೆ. ಈ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾದರೂ ಅನಂತ­ಮೂರ್ತಿ­ಯವರು ಆ ಸಮಾ­ರಂಭಕ್ಕೆ ಬಂದಿರ­ಲಿಲ್ಲ. ಇದೆಲ್ಲವನ್ನು ನೋಡಿ­ದರೆ, ಕೇವಲ ಗೌರ­ವದೃಷ್ಟಿ­ಯಿಂದ ಇಲ್ಲಿ ಅವರ ಹೆಸರು ಬಳಕೆ­ಯಾದುದು ಸ್ಪಷ್ಟವಾಗುತ್ತಿದ್ದು, ಇಂತಹ ಮಿಥ್ಯಾ­ನಾಮಧೇಯ ಕೃತಿ­ಯನ್ನು ತಮ್ಮ ನಿರ್ಣಯದ ಸಮರ್ಥ­ನೆಗಾಗಿ ಇವರು ‘ಪ್ರಜಾವಾಣಿ’ ಪತ್ರ­ದಲ್ಲಿ ಉಲ್ಲೇಖಿಸಿ­ದುದು ಸರಿಯಲ್ಲ. ಮೇಲಾಗಿ ಇದು ಅಂತಹ ಮಹತ್ವದ ಸಂಕಲನವೂ ಅಲ್ಲ.

*ಬಸವಣ್ಣ ನನ್ನ ಮೇಲೆ ಪ್ರಭಾವ ಬೀರಿದ್ದಾನೆ ಎಂದು ಅನಂತಮೂರ್ತಿಯವರು ಎಂದೋ ಒಮ್ಮೆ ಆನುಷಂಗಿಕವಾಗಿ ಹೇಳಿದು­ದನ್ನು ಇವರು ಎತ್ತಿ ಹಿಡಿದಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯ ಯಾವುದೇ ಅಭ್ಯಾಸಿ ಪಂಪ, ಬಸವಣ್ಣ, ಕುಮಾರ­ವ್ಯಾಸರ ಪ್ರಭಾವ ಹೇಳು­ವುದು ಸಹಜ. ಹೀಗಾಗಿ ಅನಂತಮೂರ್ತಿಯವರ ಈ ಒಣ ಹೇಳಿಕೆಯಲ್ಲಿ ವಿಶೇಷತೆ ಏನಿದೆ? ನಿಜವಾಗಿಯೂ ಬಸವಣ್ಣನ ಪ್ರಭಾವಕ್ಕೆ ಒಳಗಾಗಿದ್ದರೆ ಅವನ ತತ್ವಜ್ಞಾನ ‘ನಾನ್‌ಸೆನ್ಸ್’ ಎಂದು ಇವರು ಭಾಷಣದಲ್ಲಿ ಹೇಳುತ್ತಿರಲಿಲ್ಲ.

*‘ಬಸವ ಪುರಸ್ಕಾರ’ದ ನಿಯಮ­ದಂತೆ ಸರ್ವಧರ್ಮ ಸಮಾನತೆಗಾಗಿ ತನುಮನ ಅರ್ಪಿಸಿ­ಕೊಂಡ ವಿಶಿಷ್ಟ ವ್ಯಕ್ತಿಗಳು ಇಂದಿನ ದಿನ­ಮಾನದಲ್ಲಿ ಸಿಗುವುದು ದುರ್ಲಭ. ಹೀಗಿದ್ದೂ ಈ ನಿಯಮದ ಸಮೀಪ ಬದುಕಿದ ಕೆಲವರಿಗೆ ಈ ಪ್ರಶಸ್ತಿಯನ್ನು ಮೊದಮೊದಲು ಕೊಡ­ಲಾ­ಗಿದೆ. ಬಳಿಕ ಬಸವಸಾಹಿತ್ಯಸೇವೆ ಮಾಡಿದವರಿಗೂ ಕೊಡಲು ಆರಂಭಿಸಿ (ಉದಾ: ದರ್ಗಾ ಇತ್ಯಾದಿ), ಈಗ ಕೇವಲ ಸಾಹಿತ್ಯಸೇವೆ ಮಾಡಿದ ಅನಂತ­ಮೂರ್ತಿಯವರಿಗೆ ಕೊಡುವುದೆಂದರೆ, ಈ ಪ್ರಶಸ್ತಿಯನ್ನು ನಿಧಾನವಾಗಿ ಸಾಮಾಜಿಕ ನೆಲೆ­ಯಿಂದ ಸಾಹಿತ್ಯದ ನೆಲೆಗೆ ಎಳೆದು ತಂದು­ದಾಗಿದೆ. ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಬಸವಣ್ಣನವರನ್ನು ಕುರಿತು ಒಂದು ನಾಟಕ ಬರೆದವರಿಗೂ, ಒಂದು ಕವಿತೆ ಬರೆದವರಿಗೂ ಈ ಪ್ರಶಸ್ತಿ ಪ್ರಾಪ್ತವಾಗ­ಬಹುದೇನೋ. ಒಟ್ಟಾರೆ, ಈ ಪ್ರಶಸ್ತಿಯು ಮೂಲ ಉದ್ದೇಶದಿಂದ ದೂರ ಸರಿಯುತ್ತ ಬಂದಿದೆ, ಈಗ ‘ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸ­ಫರ್’ ಎಂದು ಬರೆದವರಿಗೂ ಸಂದಿದೆ.

*ನಾನು ಆಯ್ಕೆ ಸಮಿತಿಯವರ ವಿಷಯ­ದಲ್ಲಿ ‘ಹಗರಣ’, ಸರ್ಕಾರದ ವಿಷಯದಲ್ಲಿ ‘ಬೇಜವಾಬ್ದಾರಿ’ ಶಬ್ದ ಬಳಸಿದುದನ್ನು ಇವರು ಆಕ್ಷೇಪಿಸಿದ್ದಾರೆ. ಈ ಎರಡೂ ನೆಲೆಗಳಲ್ಲಿ ಜರುಗಿದ ಕ್ರಿಯೆಗಳನ್ನು ಗಮನಿಸಿ ಬಳಸಿದ ಈ ಶಬ್ದಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT