‘ವ್ಯಕ್ತಿ ಪೂಜೆ’ ನಮ್ಮ ದೇಶದ ಬಹುತೇಕ ಜನರಿಗೆ ಅಂಟಿಕೊಂಡಿರುವ ವಾಸಿಯಾಗದ ಕಾಯಿಲೆ! ಸಾರ್ವಜನಿಕವಾಗಿ ರಾಜಕೀಯ ಮುಖಂಡರ ಕಾಲಿಗೆರಗಿ ತಮ್ಮ ನಿಷ್ಠೆ (ಅಥವಾ ಗುಲಾಮಗಿರಿ) ಪ್ರದರ್ಶಿಸುವವರನ್ನು ಎಲ್ಲ ರಾಜಕೀಯ ಪಕ್ಷಗಳಲ್ಲಿ ಕಾಣುತ್ತೇವೆ. ಇದು ದಾಸ್ಯದ ಸಂಕೇತ ಎಂದು ಡಿ.ಎಂ.ಕೆ. ನೂತನ ಅಧ್ಯಕ್ಷ ಸ್ಟಾಲಿನ್ ಖಂಡಿಸಿದ್ದಾರೆ. ಇದು ಸ್ವಾಗತಾರ್ಹ!
ತಮ್ಮ ಉದ್ದೇಶ ಸಾಧನೆಗಾಗಿ ಹಲವಾರು ‘ಗಿಮಿಕ್’ ಪ್ರದರ್ಶಿಸುವ ಕಾರ್ಯಕರ್ತರು ಅಷ್ಟೇನೂ ಅಮಾಯಕರಾಗಿರುವುದಿಲ್ಲ. ಕಾಲಿಗೆ ಬೀಳುವವರು ಕಾಲೆಳೆಯಲೂ ಬಲ್ಲರು– ಕಾಲುಂಗುರ ಬಿಚ್ಚಿಕೊಳ್ಳುವ ‘ಚಾಣಾಕ್ಷ’ರೂ ಆಗಿರಬಲ್ಲರು! ಆದರೆ, ಕಾಲಿಗೆರಗುವ ದಾಸರನ್ನು ಕಂಡಾಗ ‘ಅಯ್ಯೋ ಪಾಪ’ ಎನಿಸುವುದು ಸ್ವಾಭಾವಿಕ!