ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತಮ್ಮ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲು ಈ ಬೇಸಿಗೆಯಲ್ಲಿ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಸಿ ಹರಸಾಹಸ ಪಡುತ್ತಿರುವ ವಿಚಾರ ತಿಳಿದು (ಪ್ರ.ವಾ., ಮಾರ್ಚ್ 14) ಅಯ್ಯೋ ಎನಿಸಿತು.
ಪ್ರತೀ ಬೇಸಿಗೆಯಲ್ಲೂ ಈ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ನೀರಿನ ಸಮಸ್ಯೆ ಸರ್ವೇಸಾಮಾನ್ಯ. 1,500 ಅಡಿಯಿಂದ 1,900 ಅಡಿವರೆಗೆ ಭೂಮಿ ಕೊರೆದರೂ ಅಂತರ್ಜಲ ಸಿಗುತ್ತಿಲ್ಲ ಎಂದರೆ, ಈ ಜಿಲ್ಲೆಯ ಅಂತರ್ಜಲ ಮಟ್ಟ ಎಷ್ಟು ಆತಂಕಕಾರಿ ಮಟ್ಟಕ್ಕೆ ಇಳಿದಿದೆ ಎಂಬುದು ಗೊತ್ತಾಗುತ್ತದೆ. ಆದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಯಾರು ಹೊಣೆ?
‘ನೀರಿಗಾಗಿ ಇನ್ನೆಷ್ಟು ಬಗೆಯುವಿರಿ ನನ್ನ ಗರ್ಭವ, ಈಗಾಗಲೇ ಸೋತು ನಿತ್ರಾಣಳಾಗಿದ್ದೇನೆ’ ಎಂದು ಆ ಭೂತಾಯಿ ನಮ್ಮನ್ನು ಗೋಗರೆಯುತ್ತಿರುವಂತಿದೆ. ಬನ್ನಿ, ಕೂಡಲೇ ಎಲ್ಲರೂ ಒಂದಾಗಿ ನಮ್ಮ ತಾತ– ಮುತ್ತಾತಂದಿರ ಮುಂದಾಲೋಚನೆಯ ಫಲವಾಗಿ ಬಳುವಳಿ ರೂಪದಲ್ಲಿ ಪಡೆದ ಕೆರೆ–ಕಟ್ಟೆಗಳ ಸಂರಕ್ಷಿಸೋಣ. ಮಳೆಗಾಲದಲ್ಲಿ ತುಂಬಿ ಹರಿಯುವಂತೆ ಮಾಡೋಣ.
ಮಳೆಯ ನೀರನ್ನು ವ್ಯರ್ಥವಾಗಲು ಬಿಡದೆ ಸಂಗ್ರಹಿಸೋಣ, ನಿರ್ಲಕ್ಷ್ಯಕ್ಕೆ ಒಳಗಾದ ಸಣ್ಣ ಪುಟ್ಟ ಕೆರೆ–ಕಟ್ಟೆ, ಹಳ್ಳ–ಕೊಳ್ಳಗಳಲ್ಲಿ ಪ್ರತೀ ಮಳೆಗಾಲದಲ್ಲೂ ನೀರು ಶೇಖರವಾಗುವಂತೆ ನೋಡಿಕೊಳ್ಳೋಣ. ಈ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು, ಜನಸಾಮಾನ್ಯರು ಒಂದಾಗಿ ಬೇಸಿಗೆಯನ್ನು ನಿರಾತಂಕವಾಗಿ ಎದುರಿಸೋಣ.