ವಾರ್ಡ್ ನಂಬರ್ 52ರ (ಬಚ್ಚಪ್ಪ ಬಡಾವಣೆ, ಕೃಷ್ಣರಾಜಪುರ) ಅಭಿವೃದ್ಧಿಗೆ ಕೈಹಾಕಿ ಸುಮಾರು ನಾಲ್ಕೂವರೆ ವರ್ಷಗಳಾಗಿರಬಹುದು. ಆದರೆ, ಇಲ್ಲಿನ 8ನೇ ಕ್ರಾಸ್ನ ಅಭಿವೃದ್ಧಿಯೇ ಆಗಿಲ್ಲ. ಎರಡು ತಿಂಗಳ ಗಡುವಿನಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರದಿಂದ ₨ 50 ಲಕ್ಷ ಮಂಜೂರಾಗಿತೆಂಬ ಮಾತಿದೆ. ಸಿಮೆಂಟ್ ರಸ್ತೆ ನಿರ್ಮಿಸಿದರು.
ಆದರೀಗ ಉಳಿದುಕೊಂಡಿರುವುದು ಜಲ್ಲಿ, ಮಣ್ಣು ಹಾಗೂ ಸಿಮೆಂಟ್ನ ಪಳೆಯುಳಿಕೆಗಳಷ್ಟೆ. ಈ ರಸ್ತೆಗೆ ಮೋರಿ ಮಾಡಿದ್ದು, ಅದರ ಮೇಲೆ ಸ್ಲ್ಯಾಬ್ ಮುಚ್ಚಿಲ್ಲ. ಇದರಿಂದ ಮಳೆ ಬಂದು ಮೋರಿ ತುಂಬಿದಾಗ ಮಕ್ಕಳು ಅದರಲ್ಲಿ ಕೊಚ್ಚಿಹೋಗುವ ಅಪಾಯವಿದೆ. ಅಲ್ಲದೆ 8ನೇ ಕ್ರಾಸ್ನಲ್ಲಿ ಮಲ–ಮೂತ್ರ ಹರಿದುಬಂದು ನಮ್ಮ ಮನೆಯ ಆವರಣಕ್ಕೆ ನುಗ್ಗಿದ್ದು, ಮನೆಯ ಮುಂದೆ ವಾಸನೆ ಬರುತ್ತಿದೆ.
ಬಿಬಿಎಂಪಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಕರೆ ಮಾಡಿದರೂ, ಸ್ಪಂದಿಸಲಿಲ್ಲ. ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಂಡು, ತೊಂದರೆ ನಿವಾರಿಸಬೇಕೆಂದು ಮನವಿ.