ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ ಸರ್ಕಾರವು ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಈ ಸಮಿತಿ ಈಗಾಗಲೇ ತನ್ನ ಕೆಲಸ ಆರಂಭಿಸಿರುವ ವಿಷಯವನ್ನು ‘ಪ್ರಜಾವಾಣಿ’ಯಲ್ಲಿ ಓದಿ ಸಂತೋಷವಾಯಿತು.
ಸಮಿತಿಯು ವಿಷಯಾಂಶಗಳ ಪರಿಷ್ಕರಣೆ ಜೊತೆಗೆ ಪಠ್ಯಪುಸ್ತಕಗಳ ಆಕರ್ಷಣೆ ಹೆಚ್ಚಿಸುವಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಪಠ್ಯಗಳಿಗೆ ಅಳವಡಿಸಿಕೊಳ್ಳುವ ಕಡೆ ಗಮನ ನೀಡಲು ಮಾರ್ಗದರ್ಶನ ಮಾಡಬೇಕಾಗಿದೆ.
ಪ್ರಮುಖವಾಗಿ ಮುಖಪುಟ ಹಾಗೂ ಒಳಪುಟ ವಿನ್ಯಾಸ, ಅಕ್ಷರಗಳ ನಿಖರಗಾತ್ರ, ಸಾಲುಗಳ ನಡುವಿನ ಅಂತರ, ಚಿತ್ರಗಳ ನೈಜತೆ, ಶಿಶುಸ್ನೇಹಿ ಬೈಂಡಿಂಗ್ ಅಳವಡಿಸಲು ಸೂಕ್ತ ಸಲಹೆ ನೀಡಬೇಕಾಗಿದೆ.
ಇಂತಹ ನ್ಯೂನತೆ ಉಳಿದಿರುವುದು ಆಧುನಿಕ ಮುದ್ರಣ ವಿಧಾನಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಇರಬಹುದಾದ ತಿಳಿವಳಿಕೆ ಕೊರತೆಯನ್ನು ತೋರಿಸುತ್ತದೆ. ಈ ಅಂಶದಿಂದ ಪ್ರಬಾವಿತವಾಗುವ ಖಾಸಗಿ ಮುದ್ರಣಾಲಯಗಳು ‘ಪುಟ ಹೆಚ್ಚಿದಷ್ಟೂ ಲಾಭ ಹೆಚ್ಚು’ ತಂತ್ರದಿಂದ ಲಾಭ ಪಡೆಯುತ್ತಿರಬೇಕು. ಈ ಅಂಶಗಳನ್ನು ಗಮನಿಸಿ ‘ವೃತ್ತಿನಿರತ ಪುಟ’ ವಿನ್ಯಾಸಕಾರರ ಸೇವೆ ಪಡೆದು ನವನವೀನ ‘ಮಕ್ಕಳ ಸ್ನೇಹಿ’ ಪಠ್ಯಪುಸ್ತಕಗಳನ್ನು ಇಲಾಖೆ ರೂಪಿಸುವತ್ತ ಗಮನ ನೀಡಬೇಕಾಗಿದೆ.