ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆದರೆ ರಾಜಕೀಯ ಪಕ್ಷಗಳಲ್ಲಿನ ಬಿರುಸಿನ ಚಟುವಟಿಕೆಗಳನ್ನು ನೋಡಿದರೆ, ಚುನಾವಣೆ ಇನ್ನೇನು ಎರಡೋ ಮೂರೋ ತಿಂಗಳಲ್ಲಿ ಬಂದೇಬಿಟ್ಟಿತೇನೋ ಎಂದು ಅನ್ನಿಸುತ್ತಿದೆ.
ಪಕ್ಷಾಂತರ, ಅರೋಪ- ಪ್ರತ್ಯಾರೋಪ, ಗೆಲ್ಲುವ ಕುದುರೆಗೆ ಹುಡುಕಾಟ, ತೇಜೋವಧೆ, ವ್ಯಕ್ತಿ ಪೂಜೆ ಮಧ್ಯೆ ರಾಜ್ಯದ ಅಭಿವೃದ್ಧಿ ವಿಷಯ, ಭೀಕರ ಬರ... ನೇಪಥ್ಯಕ್ಕೆ ಸರಿದಿವೆ.
ಮುಂದಿನ ದಿನಗಳಲ್ಲಿ ಪ್ರಧಾನಿಯೂ ರಾಜ್ಯಕ್ಕೆ ಭೇಟಿ ನೀಡಬಹುದು. ಹಲವಾರು ಯೋಜನೆಗಳ ಘೋಷಣೆಯಾಗಬಹುದು. ಅಡಿಗಲ್ಲುಗಳು ಬೀಳಬಹುದು. ನಿಂತ ಕೆಲವು ಯೋಜನೆಗಳು ಪುನರಾರಂಭವಾಗಬಹುದು.
ಕೇಂದ್ರದ ಸಚಿವರು ಕರ್ನಾಟಕಕ್ಕೆ ಬರಬಹುದು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ನಿಚ್ಚಳವಾಗಿ ಕಾಣಬಹುದು. ಮಹಾದಾಯಿ, ಕಾವೇರಿ ನೀರು ಹಂಚಿಕೆಯ ಸಮಸ್ಯೆಗಳು ಗಮನ ಸೆಳೆಯಬಹುದು... ಪ್ರಜಾಪ್ರಭುತ್ವಕ್ಕೆ ವ್ಯಾಖ್ಯೆ ಕೊಟ್ಟ ಅಬ್ರಹಾಂ ಲಿಂಕನ್ ಬದುಕಿದ್ದಿದ್ದರೆ, ತಮ್ಮ ವ್ಯಾಖ್ಯೆಯನ್ನು ಬದಲಿಸುತ್ತಿದ್ದರೇನೋ?