ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಶುರುವಾಗಿದೆ. ಪ್ರಧಾನಿಯೂ ಈ ಬಗ್ಗೆ ಮಾತನಾಡಿದ್ದಾರೆ. ಹೀಗೆ ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ತನಗೆ ಲಾಭವಿದೆ ಎಂದು ಅರಿತುಕೊಂಡಿರುವ ರಾಜಕೀಯ ಪಕ್ಷವೊಂದು ಸಹಜವಾಗಿಯೇ ಇದರ ಪರ ವಾದಿಸುತ್ತಿದೆ. ಆದರೆ ಕನಿಷ್ಠ ವಿವೇಚನಾಶಕ್ತಿ ಇರುವ ಮತ್ತು ಭಾರತೀಯ ಸಂಸದೀಯ ಪ್ರಜಾತಂತ್ರದ ಬಗ್ಗೆ ಕನಿಷ್ಠ ಜ್ಞಾನ ಇರುವ ಯಾರಿಗೇ ಆದರೂ ಹೀಗೆ ಚುನಾವಣೆ ನಡೆಸುವುದು ಕಾರ್ಯಸಾಧ್ಯವಲ್ಲ ಎಂಬುದು ತಿಳಿಯದ್ದೇನಲ್ಲ.
ನಿದರ್ಶನಕ್ಕೆ ಹೇಳುವುದಾದರೆ, ರಾಜ್ಯ ಅಥವಾ ಕೇಂದ್ರದ ಯಾವುದೇ ಸರ್ಕಾರ ಪೂರ್ಣಾವಧಿ ಬಾಳಬೇಕೆಂದೇನೂ ಇಲ್ಲ. ಬಹುಮತದ ಕೊರತೆಯಿಂದ ಸರ್ಕಾರಗಳು ಅಕಾಲಿಕವಾಗಿ ಬಿದ್ದು ಹೋಗಬಹುದು. ವಿರೋಧ ಪಕ್ಷಗಳು ಸೇರಿ ಸರ್ಕಾರ ಮಾಡುವ ಸಾಧ್ಯತೆಯೂ ಇಲ್ಲದೇ ಹೋದಾಗ ಅಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ. ಈ ಚುನಾವಣೆಗೆ ದೇಶದ ಎಲ್ಲ ರಾಜ್ಯಗಳು ಮತ್ತು ಸಂಸತ್ತಿನ ಚುನಾವಣೆ ಬರುವವರೆಗೆ ಕಾಯಲಾಗುತ್ತದೆಯೇ? ಚುನಾವಣಾ ಆಯೋಗ ಕೂಡ ಇದೇ ಮಾತನ್ನು ಹೇಳಿದೆ. ಆದರೂ ಕಾರ್ಯಸಾಧ್ಯವಲ್ಲದ ವಿಚಾರವೊಂದರ ಬಗ್ಗೆ ಚರ್ಚೆ ನಡೆಯುತ್ತಿರುವುದು ವಿಷಾದನೀಯ.