ಉತ್ತರ ಕರ್ನಾಟಕದಲ್ಲಿ ಬೇಸಿಗೆಯ ಪ್ರಾರಂಭದಲ್ಲಿಯೇ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗುವ ಸ್ಥಿತಿಯಲ್ಲಿದ್ದು ಒಂದು ವಾರಕ್ಕಾಗುವಷ್ಟು ನೀರು ಮಾತ್ರ ಉಳಿದಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಚಿಕ್ಕೋಡಿ ಮುಂತಾದ ತಾಲ್ಲೂಕುಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಒದಗಿ ಬಂದಿದೆ.
ಆದ್ದರಿಂದ ಸರ್ಕಾರ ಕೂಡಲೆ ಎಚ್ಚೆತ್ತು ಮುಂದಿನ ಅಪಾಯವನ್ನು ಅರಿತು ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನೊ ಜಲಾಶಯದಿಂದ ನೀರು ಹರಿಸಲು ಪ್ರಯತ್ನ ಪಡಬೇಕಿದೆ. ಮತ್ತು ಈಗ ನದಿಯಲ್ಲಿರುವ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸುವ ಆದೇಶವನ್ನು ಜಿಲ್ಲಾಡಳಿತ ಈ ಕೂಡಲೇ ಹೊರಡಿಸಬೇಕಿದೆ ಮತ್ತು ನೀರಿನ ಹಾಹಾಕಾರವಿರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ಈ ಕೂಡಲೇ ಪ್ರಾರಂಭಿಸಬೇಕು.
ಈಗ ನದಿಯಲ್ಲಿ ನಿಂತಿರುವ ನೀರು ಕೊಳೆಯಿಂದ ಕೂಡಿದ್ದು ಇದರಿಂದಾಗಿ ಕರುಳು ಬೇನೆಯಂತಹ ರೋಗಗಳು ಉಲ್ಬಣವಾಗುವ ಸ್ಥಿತಿ ಇದೆ. ಇದರಿಂದ ಜನಸಾಮಾನ್ಯರ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ಆದ್ದರಿಂದ ಇಂತಹ ನೀರನ್ನು ಪೂರೈಸುವ ಮುಂಚೆ ಶುದ್ಧೀಕರಣಕ್ಕೆ ಸರ್ಕಾರ ಹೆಚ್ಚಿನ ಗಮನ ನೀಡಬೇಕು.