ನಮ್ಮ ಹಳ್ಳಿಗಳಲ್ಲಿ ‘ಕೋಣನ ತಪ್ಪಿಗೆ ಎತ್ತಿಗೆ ಬರೆ’ ಎಂಬ ಮಾತು ಆಡಿಕೊಳ್ಳುವುದಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈಚೆಗೆ ಈ ಮಾತು ಅಕ್ಷರಶಃ ನನ್ನ ಅನುಭವಕ್ಕೆ ಬಂತು. ಮೈಸೂರಿನಿಂದ ಉದಯಪುರಕ್ಕೆ ಹೋಗುವ ‘ಹಂಸಫರ್’ ರೈಲಿನಲ್ಲಿ ನನ್ನ ಮಗಳು ಪ್ರಯಾಣಿಸಬೇಕಿತ್ತು. ಅವಳನ್ನು ಕಳುಹಿಸಿಕೊಡಲು ಬಂದಿದ್ದೆ. ರೈಲು ಹೊರಡುವ ಸಮಯ ರಾತ್ರಿ 8.50 ಆಗಿದ್ದರಿಂದ 8 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣ ಪ್ರವೇಶಿಸಿದ್ದೆವು. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದುದರಿಂದ ₹ 20 ತೆತ್ತು, ಪ್ಲಾಟ್ಫಾರ್ಮ್ನ ಎರಡು ಟಿಕೆಟ್ ತೆಗೆದುಕೊಂಡಿದ್ದೆ. ಆದರೆ ಏನೋ ತಾಂತ್ರಿಕ ತೊಂದರೆಯಿಂದಾಗಿ ಆ ರೈಲು ಅಂದು ಹುಬ್ಬಳ್ಳಿ ತಲುಪಿ, ಅಲ್ಲಿಂದ ಹೊರಟಾಗ ರಾತ್ರಿ 1.30 ಆಗಿತ್ತು. ಪ್ಲಾಟ್ಫಾರ್ಮ್ ಟಿಕೆಟ್ ಅವಧಿ ಎರಡು ತಾಸು ಮಾತ್ರ ಇರುವುದರಿಂದ ನಾನು ಮೂರು ಸಲ ಟಿಕೆಟ್ ಪಡೆಯಬೇಕಾಯಿತು. ಇದೇ ಅನುಭವ ಇತರರಿಗೂ ಆಗಿರಬಹುದು. ರೈಲು ಸಕಾಲಕ್ಕೆ ಬಂದಿದ್ದರೆ, ನಮಗೆ ಈ ಹಣ ಉಳಿಯುತ್ತಿತ್ತು. ತಡವಾದುದಕ್ಕೆ ಇಲಾಖೆ ಹೊಣೆಯೇ ಹೊರತು ಪ್ರಯಾಣಿಕರಲ್ಲವಲ್ಲ?