‘ಪ್ರಜಾವಾಣಿ’ ಆಗಸ್ಟ್ 28ರ ಸಂಚಿಕೆಯ ಸಂಪಾದಕೀಯ, ‘ಅನುರಣನ’ ಅಂಕಣದ ‘ಖಾಸಗಿತನದ ಹಕ್ಕು...’ ಹಾಗೂ ಆಕಾರ್ ಪಟೇಲ್ ಅವರ ‘...ಆಧಾರ್ ಒಪ್ಪಲಾದೀತೆ?’ ಲೇಖನಗಳನ್ನು ಸಾವಕಾಶವಾಗಿ ಓದಿ, ಮನನ ಮಾಡಿದ ಬಳಿಕ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಕೆಲವು ತಿಂಗಳ ಹಿಂದೆ ನಗರವೊಂದರಲ್ಲಿ ನಡೆದ ವೈದ್ಯಕೀಯ ಸಮ್ಮೇಳನಕ್ಕೆ ಹೋಗಿದ್ದೆ. ನನ್ನ ಸ್ನೇಹಿತರೊಬ್ಬರು ಮುಂಚಿತವಾಗಿಯೇ ನನಗಾಗಿ ಕಾದಿರಿಸಿದ್ದ ವಸತಿಗೃಹಕ್ಕೆ ಹೋದಾಗ ಅಲ್ಲಿ ಸ್ವಾಗತಕಾರರು ಆಧಾರ್ ಕಾರ್ಡ್ಗಾಗಿ ಆಗ್ರಹಿಸಿದರು. ನಾನು ಕಳ್ಳನೋ, ಉಗ್ರವಾದಿಯೋ ಇರಬಹುದೆಂದು ಅವರ ಅನಿಸಿಕೆ ಆಗಿರಬಹುದು ಎಂದು ನನಗೆ ಭಾಸವಾಯಿತು.
ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿರುವ ದುರುಳರನ್ನು ನಿಯಂತ್ರಿಸಲಾರದ ಸರ್ಕಾರ, ಎಲ್ಲರನ್ನೂ ದುರುಳರೆಂದೇ ಭಾವಿಸುವಂತೆ ಆಧಾರ್ ಕಾರ್ಡ್ ಜಾರಿ ಮಾಡಿದೆ. ಇಷ್ಟಕ್ಕೂ ಬೆಂಗಳೂರಿನಲ್ಲೇ ಸಾಕಷ್ಟು ಸಂಖ್ಯೆಯ ಬಾಂಗ್ಲಾದೇಶಿಯರು ಆಧಾರ್ ಕಾರ್ಡ್ ಪಡೆದಿರುವ ವಿಷಯ ಟಿ.ವಿ. ಚಾನೆಲ್ವೊಂದರಲ್ಲಿ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರವಾದರೂ ಖಾಸಗಿತನವೆಂಬ ಒಡವೆ ಪ್ರಜೆಗಳಿಗೆ ದೊರಕಿದರೆ ನಾವು ಬಯಸಿ ಪಡೆದ ಸ್ವಾತಂತ್ರ್ಯ ಹಾಗೂ ಗಣರಾಜ್ಯದ ಕಲ್ಪನೆ ಸಾರ್ಥಕವಾಗಬಹುದು!