ಇತ್ತೀಚೆಗೆ ಹಗಲು–ರಾತ್ರಿ ಎನ್ನದೆ ಕಂಡಕಂಡಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಮೊನ್ನೆ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಎಲ್ಲರ ಎದುರೇ ಸ್ವಾತಿ ಎನ್ನುವ ಯುವ ಎಂಜಿನಿಯರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು.
ಕಷ್ಟಪಟ್ಟು ಓದಿ ಎಂಜಿನಿಯರ್ ಆದ ಆ ಹೆಣ್ಣುಮಗಳ ಜೀವ ಮತ್ತೆ ಬರುತ್ತದೆಯೇ, ಅವರ ಪೋಷಕರ ಸ್ಥಿತಿ ಏನಾಗಬೇಕು, ವಿದ್ಯಾವಂತ ಹೆಣ್ಣುಮಕ್ಕಳ ಸ್ಥಿತಿಯೇ ಹೀಗಾದರೆ ಉಳಿದವರ ಪಾಡೇನು?
ಇಂದು ಹೆಣ್ಣುಮಕ್ಕಳು ಶಿಕ್ಷಣಕ್ಕಾಗಿಯೋ, ನೌಕರಿಗಾಗಿಯೋ ಹುಟ್ಟಿ–ಬೆಳೆದ ಊರು ಮತ್ತು ಪೋಷಕರನ್ನು ಬಿಟ್ಟು ಪರಸ್ಥಳಗಳಲ್ಲಿ ವಾಸಿಸುತ್ತಾರೆ. ಓದು–ಕೆಲಸಕ್ಕಾಗಿ ಕೆಲವರು ಪ್ರತಿದಿನ ಬಸ್, ರೈಲಿನಲ್ಲಿ ಓಡಾಡುತ್ತಾರೆ. ಅಂಥವರು ಸದಾ ಆತಂಕದಿಂದಲೇ ಇರುವ ಪರಿಸ್ಥಿತಿ ಎದುರಾಗಿದೆ. ಪೋಷಕರ ಚಿಂತೆಯನ್ನೂ ಹೆಚ್ಚಿಸಿದೆ.
ಸಣ್ಣಪುಟ್ಟ ಕಾರಣಕ್ಕೆಲ್ಲಾ ಹಲ್ಲೆ ಕೊಲೆಗಳು ನಡೆಯುತ್ತಿವೆ. ಹೆಣ್ಣುಮಕ್ಕಳು ಹಿಂದೆಂದಿಗಿಂತಲೂ ಈಗ ಎಚ್ಚರಿಕೆಯಿಂದ ಇರಬೇಕು. ತಮ್ಮ ರಕ್ಷಣೆಯನ್ನು ತಾವು ಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿರಬೇಕು. ಅನೇಕ ಹೆಣ್ಣುಮಕ್ಕಳು ತಮ್ಮ ಪೋಷಕರಲ್ಲಿ ಮನಬಿಚ್ಚಿ ಮಾತನಾಡುವುದಿಲ್ಲ. ಅನೇಕ ವಿಷಯಗಳನ್ನು ಹೆತ್ತವರಲ್ಲಿ ಹೇಳಲು ಹೆದರಿ ಗುಟ್ಟು ಮಾಡುತ್ತಾರೆ.
ಪೋಷಕರು ಸದಾ ತಮ್ಮ ಬೆಂಬಲಕ್ಕೆ ಬರುತ್ತಾರೆ ಎಂಬುದನ್ನು ಮರೆಯುತ್ತಾರೆ. ಇವರ ಈ ದೌರ್ಬಲ್ಯವನ್ನು ನೋಡಿಕೊಂಡು ಹುಡುಗರು ಬೆದರಿಕೆ ಹಾಕಲು ಶುರು ಮಾಡುತ್ತಾರೆ. ಪೋಷಕರಿಗೆ ವಿಷಯ ತಿಳಿದಿದ್ದರೆ ಇಂಥ ಘಟನೆಗಳನ್ನು ತಡೆಯ ಬಹುದು, ತಪ್ಪಿಸಬಹುದು. ಕಿಡಿಗೇಡಿಗಳನ್ನು, ಹೆಣ್ಣು ಮಕ್ಕಳ ಪೀಡಕರನ್ನು ಮಟ್ಟಹಾಕಬಹುದು.
ಹೆಣ್ಣುಮಕ್ಕಳು ಹೆತ್ತವರಲ್ಲಿ ಅಥವಾ ಪೋಷಕರಲ್ಲಿ ಗುಟ್ಟು ಮಾಡಬಾರದು, ಮಾಡಿದರೆ ಕಷ್ಟ ಅನುಭವಿಸಬೇಕಾದೀತು.