ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹರಕೆ ತೀರಿಸಲು ಭಕ್ತರು ಕಾದಿರುತ್ತಾರೆ. ಭಕ್ತಿಶ್ರದ್ಧೆಯ ಆವೇಶದಲ್ಲಿ ಮೈಮರೆತು ಸಂಕಟಗಳಿಗೂ ಗುರಿಯಾಗುತ್ತಾರೆ. ತುಮಕೂರು ತಾಲ್ಲೂಕಿನ ಹೆತ್ತೇನಹಳ್ಳಿಯ ಜಾತ್ರೆಯಲ್ಲಿ ಹರಕೆ ತೀರಿಸಲು ಹೋಗಿ 80 ಜನ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿರುವುದು ಇದಕ್ಕೆ ಉದಾಹರಣೆ.
ಇಂಥ ಕಾರ್ಯಕ್ರಮಗಳಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ದುರಂತವೇ ನಡೆದುಹೋಗುತ್ತದೆ. ಹಾಗಾಗಿ ಹರಕೆ ತೀರಿಸುವಾಗ ಅಲ್ಲಿನ ವ್ಯವಸ್ಥೆಯನ್ನು ಮೊದಲು ಗಮನಿಸುವುದು ಒಳ್ಳೆಯದು. ಇನ್ನು ಜಾತ್ರೆಯಲ್ಲಿ ಆಹಾರದ ವಿಷಯದಲ್ಲೂ ಎಚ್ಚರ ವಹಿಸಬೇಕು. ಎಷ್ಟೋ ಕಡೆಗಳಲ್ಲಿ ಅಲ್ಲಿನ ನೀರೂ ಕಲುಷಿತಗೊಂಡಿರುತ್ತದೆ. ಜಾತ್ರೆಗಳಿಂದಲೇ ಅನೇಕ ರೋಗಗಳು ಹಬ್ಬುವುದು ಸಾಮಾನ್ಯ. ಜಾತ್ರೆ ನಡೆಯುವಾಗ ಸ್ಥಳೀಯ ಆಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಜನರಿಗಾಗುವ ಅನೇಕ ತೊಂದರೆಗಳನ್ನು ತಪ್ಪಿಸಬಹುದು.