ಸಾಹಿತ್ಯ ಸಮ್ಮೇಳನದಲ್ಲಿ ಸಾಮೂಹಿಕ ದಾಸೋಹ ಬಂದ್ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಲಂಬಿ ಘೋಷಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮೂಹಿಕ ಅನ್ನ ದಾಸೋಹವನ್ನು ಅವ್ಯವಸ್ಥೆ ಕಾರಣಕ್ಕಾಗಿ ಸ್ಥಗಿತಗೊಳಿಸುವ ಅಧ್ಯಕ್ಷರ ನಿರ್ಧಾರ ಸರಿಯಲ್ಲ, ಕಳೆದ 78 ಸಮ್ಮೇಳನಗಳಲ್ಲೂ ಅವ್ಯವಸ್ಥೆ ಇತ್ತೇ? ಮೂಡುಬಿದರೆ, ಕನಕಪುರದಲ್ಲಿ ನಡೆದ ಸಮ್ಮೇಳನದಲ್ಲಿ ತುಂಬಾ ಅಚ್ಚುಕಟ್ಟಾದ ವ್ಯವಸ್ಥೆ ಆಗಿದ್ದನ್ನು ನೆನಪಿಸಲು ಬಯಸುತ್ತೇನೆ.
`ಆಳ್ವಾಸ್ ನುಡಿಸಿರಿ' ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥಿತವಾದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು, ಇಷ್ಟೆಲ್ಲಾ ನಿದರ್ಶನಗಳು ನಮ್ಮ ಮುಂದಿವೆ.
ನಾಡಿನ ಶರಣ ಪರಂಪರೆಯ ಮಠಮಾನ್ಯಗಳಲ್ಲಿ ಜನರಿಗೆ ನಿತ್ಯವೂ ವ್ಯವಸ್ಥಿತವಾಗಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಇವುಗಳ ಮಾದರಿ ಕಣ್ಣಮುಂದೆ ಇರುವಾಗ ಸರಿಯಾಗಿ ಕಾರ್ಯಕ್ರಮ ಆಯೋಜಿಸುವ ಬದಲು ಅನ್ನ ದಾಸೋಹ ಬಂದ್ ಮಾಡುವ ಚಿಂತನೆ ಎಷ್ಟು ಸರಿ? ಯಾವಾಗಲೂ ಹೊಟ್ಟೆ ಹಸಿವಾಗುತ್ತದೆ ಎಂದು ಆಹಾರ ತೆಗೆದುಕೊಳ್ಳುವ ಬದಲು ಹೊಟ್ಟೆಯನ್ನೇ ತೆಗೆದು ಹಾಕಲು ಸಾಧ್ಯವೇ ? ಅನ್ನ ಮತ್ತು ಸಾಹಿತ್ಯ ಒಂದಕ್ಕೊಂದು ಅನೂಹ್ಯ ಸಂಬಂಧ ಹೊಂದಿವೆ, ಇತಿಹಾಸವನ್ನು ಗಮನಿಸಿದಾಗ ನದಿಕಣಿವೆಗಳಲ್ಲಿ ಜನರು ವಾಸಿಸುತ್ತಿದ್ದರು.
ಏಕೆಂದರೆ ನೀರು ಬದುಕಿಗೆ ಅತಿಮುಖ್ಯ. ಹಾಗೆ, ಅನ್ನ ಉತ್ಪಾದಿಸಿಕೊಳ್ಳಲು ನೀರು ಬೇಕು. ಹೀಗೆ ತಮ್ಮ ಪ್ರಾಥಮಿಕ ಅಗತ್ಯತೆಗಳ ಪೂರೈಕೆಯಾದ ಮೇಲೆ ಮೌಖಿಕ ಸಾಹಿತ್ಯವನ್ನು ರೂಢಿಸಿಕೊಂಡರು. ಸಮಸ್ಯೆಗಳಿಗೆ ಪರಿಹಾರಗಳು ಹಲವು ಇವೆ. ಯೋಚಿಸಿ.