2015ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಕರೆದು, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸದೆ ಸುಮ್ಮನೆ ಕೂತಿದ್ದಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ಒಂದು ಬಾರಿ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ.
ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ಎರಡು ದಿನಗಳ ನಂತರ ಪ್ರಿಂಟ್ಔಟ್ ತೆಗೆದುಕೊಳ್ಳಲು ಇಲಾಖೆ ತಿಳಿಸಿದೆ. ಆದರೆ ಕೊನೆಯ ಪ್ರಿಂಟ್ಔಟ್ನಲ್ಲಿ ವಿವರಗಳೆಲ್ಲಾ ಅದಲು ಬದಲಾಗಿವೆ. ಅರ್ಜಿಯಲ್ಲಿ, ‘ನೀವು 1989ರ ಮುಂಚೆ ಟಿಸಿಎಚ್ ಪದವಿ ಪಡೆದಿದ್ದೀರಾ’ ಎಂದು ಕೇಳಲಾಗಿದೆ. ಅದಕ್ಕೆ ‘ಇಲ್ಲ’ (ನೋ) ಎಂದು ಉತ್ತರಿಸಿದ್ದರೂ ಕೊನೆಯ ಪ್ರಿಂಟ್ಔಟ್ನಲ್ಲಿ ‘ಹೌದು’ (ಎಸ್) ಎಂದು ತಾನೇ ತಾನಾಗಿ ಭರ್ತಿ ಆಗಿರುತ್ತದೆ. ಇದರಿಂದ ಅಭ್ಯರ್ಥಿಗಳು ₹ 260 ಕೊಟ್ಟು ಅರ್ಜಿ ಸಲ್ಲಿಸಿದ್ದರೂ, ಮತ್ತೆ ಅಷ್ಟು ಹಣ ತೆರಬೇಕಾಗಿದೆ. ನಿರುದ್ಯೋಗಿಗಳು ಹೇಗೆ ತಾನೆ ಅರ್ಜಿಗೆ ಹಣ ಹೊಂದಿಸುತ್ತಾರೆ?ಸರಿಯಾದ ಸಾಫ್ಟ್ವೇರ್ ಒದಗಿಸದೆ ನಿರೋದ್ಯೋಗಿಗಳಿಂದ ಹಣ ದರೋಡೆ ಮಾಡುತ್ತಿರುವ ಶಿಕ್ಷಣ ಇಲಾಖೆಯ ಮೊಂಡಾಟಕ್ಕೆ ಬಡಪಾಯಿಗಳು ಬಲಿಯಾಗುತ್ತಿದ್ದಾರೆ.