ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಡಾ. ಅಂಬೇಡ್ಕರ್ ಅವರು 1942ರಲ್ಲಿಯೇ ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೆಂದು ರಘೋತ್ತಮ ಹೊ.ಬ. ತಿಳಿಸಿದ್ದಾರೆ (ಸಂಗತ, ಮೇ 18). ಅಂಬೇಡ್ಕರ್ ಅವರ ಪತ್ರದಲ್ಲಿನ ಒಂದು ವಾಕ್ಯ ನನ್ನಲ್ಲಿ ಗಲಿಬಿಲಿಯನ್ನುಂಟು ಮಾಡಿತು. ಅದೆಂದರೆ ‘ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ಮಾನ್ಯತೆ ಪಡೆದ ಗುತ್ತಿಗೆದಾರರು 1,171.
ಇವರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಒಬ್ಬರು ಮಾತ್ರ. ಮಿಕ್ಕವರು ಹಿಂದೂಗಳು, ಸಿಖ್ಖರು, ಮುಸ್ಲಿಮರು’. ಈ ವಾಕ್ಯದಲ್ಲಿ ಪರಿಶಿಷ್ಟ ಜಾತಿಯವರು ಯಾವ ಧರ್ಮಕ್ಕೆ ಸೇರಿದವರೆಂದು ನನಗೆ ತಿಳಿಯಲಿಲ್ಲ. ಅನುಮಾನ ಪರಿಹರಿಸಿಕೊಳ್ಳಲು ಅಂಬೇಡ್ಕರ್ ಅವರು ಈಗಿಲ್ಲ. ಅವರು ಪರಿಶಿಷ್ಟ ಜಾತಿಯವರನ್ನು ಬಹುಶಃ ಬೌದ್ಧ ಧರ್ಮಕ್ಕೆ ಸೇರಿಸಿರಬಹುದು.
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ಈಗ ನಿದ್ದೆಯಿಂದ ಎಚ್ಚೆತ್ತು, ಪರಿಶಿಷ್ಟ ಜಾತಿ, ಪಂಗಡದವರಿಗೆ ಟೆಂಡರ್ ಇಲ್ಲದೆ ನೇರವಾಗಿ ಗುತ್ತಿಗೆ ಕೊಡುವ ಪ್ರಸ್ತಾವ ಸಿದ್ಧಪಡಿಸಿದೆ. ಹಾಗಿದ್ದರೆ ಈ ವರ್ಗಗಳಲ್ಲಿ ಯಾವ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಗುತ್ತಿಗೆ ನೀಡಲಾಗುತ್ತದೆ? ಗುತ್ತಿಗೆದಾರರಿಗೆ ಇರಬೇಕಾದ ಅರ್ಹತೆ ಏನು? ಗುತ್ತಿಗೆದಾರರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಯಾಕೆ ತಿಳಿಸಿಲ್ಲ?
ಗುತ್ತಿಗೆ ಪಡೆಯುವ ವ್ಯಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರಬೇಕೇ? ವಿಧಾನ ಸೌಧದಲ್ಲಿರುವ ಭ್ರಷ್ಟ ಮಂತ್ರಿಗಳ, ಐಎಎಸ್ ಅಧಿಕಾರಿಗಳ ಚೇಲಾ ಆಗಿರಬೇಕೇ? ಕಾಮಗಾರಿಗೆ ಇಟ್ಟಿರುವ ಮೊತ್ತದಿಂದ ಈ ಮೇಲ್ಕಂಡ ವ್ಯಕ್ತಿಗಳಿಗೆ ಪ್ರಾಮಾಣಿಕವಾಗಿ ‘ಪ್ರಸಾದ’ ಸಲ್ಲಿಸುವವನಾಗಿರಬೇಕೇ? ಟೆಂಡರ್ ಇಲ್ಲದೆ ಗುತ್ತಿಗೆ ನೀಡುವ ಪದ್ಧತಿ ಸಂವಿಧಾನ ವಿರೋಧಿಯಲ್ಲವೇ?
ಸಿದ್ದರಾಮಯ್ಯನವರ ಸರ್ಕಾರಕ್ಕೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ’ಗೆ ಸರಿಯಾದ ರೀತಿಯಲ್ಲಿ ತಿದ್ದುಪಡಿ ತರಲಿ. ಸರ್ಕಾರಿ ನೌಕರಿಯಲ್ಲಿ ನೀಡಿರುವ ಮೀಸಲಾತಿಯಂತೆ ಸರ್ಕಾರಿ ಕಾಮಗಾರಿಗಳಲ್ಲಿಯೂ ದಲಿತರಿಗೆ ಮೀಸಲಾತಿ ನೀಡಲಿ. ಅವರಿಗಾಗಿಯೇ ಪ್ರತ್ಯೇಕ ಟೆಂಡರ್ ಕರೆಯಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.