ಗೋಮಾಂಸ ಮತ್ತು ಹಂದಿ ಮಾಂಸ ಸೇವನೆಯ ವಿಚಾರದಲ್ಲಿ ಇತ್ತೀಚೆಗೆ ಅನೇಕ ಗೊಂದಲ, ವಾದ–ವಿವಾದಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ, ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಒಂದು ಬಣ ಇದೇ 10ರಂದು ಗೋಮಾಂಸಾಹಾರದ ಉತ್ಸವ ಆಯೋಜಿಸಿದ್ದು, ಮತ್ತೊಂದು ಬಣ ಅದೇ ದಿನ ಕ್ಯಾಂಪಸ್ನಲ್ಲಿ ಹಂದಿ ಮಾಂಸಾಹಾರದ ಉತ್ಸವ ಏರ್ಪಡಿಸಲು ಮುಂದಾಗಿದೆ. ಇದು ಪ್ರಾಣಿಪ್ರಿಯರಿಗೆ ಆಘಾತಕಾರಿಯಾದ ವಿಷಯ. ಮನುಷ್ಯ, ಮನುಷ್ಯರ ನಡುವಿನ ಸಂಘರ್ಷದಲ್ಲಿ ಪ್ರಾಣಿಗಳನ್ನು ಬಲಿ ಕೊಟ್ಟು ಉತ್ಸವ ಏರ್ಪಡಿಸುವುದು ಯಾವ ನ್ಯಾಯ?
ರಾಷ್ಟ್ರಕ್ಕೆ ರೈತ ಬೆನ್ನೆಲುಬಾದರೆ ರೈತನಿಗೆ ಜಾನುವಾರುಗಳೇ ಬೆನ್ನೆಲುಬು. ಇನ್ನು ಕೆಲವು ಸಮುದಾಯಗಳು ಜೀವನೋಪಾಯಕ್ಕಾಗಿ ಹಂದಿ ಸಾಕಣೆ ಮಾಡುತ್ತಿವೆ. ಭೂಮಿಯ ಮೇಲೆ ಮನುಷ್ಯ ಮಾಂಸಾಹಾರವಿಲ್ಲದೆ ಬದುಕಬಹುದು, ಆದರೆ ಪ್ರಾಣಿಗಳಿಲ್ಲದೆ ಆತನ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು.