ಚನ್ನಪಟ್ಟಣ ತಾಲ್ಲೂಕಿನ ಗೊಲ್ಲರದೊಡ್ಡಿಯಲ್ಲಿ ಅತ್ಯಾಚಾರಕ್ಕೆ ಒಳಗಾದ 17ರ ಹುಡುಗಿಯ ವ್ಯಥೆ ಓದಿ ಎದೆ ನಡುಗಿತು (ಪ್ರ.ವಾ., ಆ.2). ಅವಿವಾಹಿತ ಹುಡುಗಿ ಮಗು ಹಡೆದರೆ ಸೂತಕ ಎಂದು ಭಾವಿಸಿ ಮಗು ಮತ್ತು ಬಾಣಂತಿಯನ್ನು ಊರ ಹೊರಗೆ ‘ದೂಡಿದ್ದು’ ಅತ್ಯಂತ ಅಮಾನವೀಯ.
ಸೂತಕದ ಹೆಸರಲ್ಲಿ ಬಾಣಂತಿ ಮತ್ತು 11 ದಿನದ ಕೂಸನ್ನು ಊರಿನಿಂದ ಹೊರಗಟ್ಟಿರುವುದು ಅಜ್ಞಾನದ ಪರಮಾವಧಿ. ಬಾಣಂತಿಯು 9 ತಿಂಗಳು ಮಗುವನ್ನು ಹೊತ್ತು ತನ್ನ ಶರೀರದ ಅರ್ಧಶಕ್ತಿಯನ್ನು ಧಾರೆ ಎರೆದು ಮಗುವನ್ನು ಹಡೆಯುತ್ತಾಳೆ. ಹಡೆದಾಗ ರಕ್ತಸ್ರಾವವಾಗಿ ಆಕೆ ನಿತ್ರಾಣಗೊಂಡಿರುತ್ತಾಳೆ. ಬೆನ್ನುಮೂಳೆ ದುರ್ಬಲವಾಗಿರುತ್ತದೆ. ಬೆನ್ನೆಲುಬು ಸರಿಯಾಗಲು ಮತ್ತು ಹಿಂದಿನ ಶಕ್ತಿಯನ್ನು ಮರಳಿ ಪಡೆಯಲು ಕನಿಷ್ಠ 6 ತಿಂಗಳು ವಿಶ್ರಾಂತಿ ಬೇಕಾಗುತ್ತದೆ. ಬಿಸಿಯಾದ, ಶುಚಿಯಾದ ಪೌಷ್ಟಿಕ ಆಹಾರ, ಬೆಚ್ಚನೆ ಉಡುಪು, ಕುಟುಂಬದವರಿಂದ ರಕ್ಷಣೆ, ಸಹಕಾರ, ಬಾಣಂತಿಗೆ ಅತ್ಯವಶ್ಯಕ. ಅಂತಹ ಸ್ಥಿತಿಯಲ್ಲಿ ಊರ-ಹೊರಗೆ ಅಸುರಕ್ಷಿತ ವಾತಾವರಣಕ್ಕೆ ದೂಡುವುದು ಸಂಪ್ರದಾಯವಲ್ಲ, ಅದು ಮೌಢ್ಯ. ಈ ಗ್ರಾಮದ ಮುಖಂಡರು, ಪ್ರಜ್ಞಾವಂತರಾಗಬೇಕು. ಜನರಿಗೆ ತಿಳಿಹೇಳಬೇಕು.