ಅನಕ್ಷರತೆ, ಸಂಪ್ರದಾಯ ಹಾಗೂ ಮೌಢ್ಯತೆ ಹಿಂದಿನ ಜನರನ್ನು ಮುಗ್ಧರನ್ನಾಗಿಸಿತ್ತು. ಇದರಿಂದಾಗಿ ಹಿಂದೆ ಬಾಲ್ಯವಿವಾಹಗಳು ನಡೆಯುತ್ತಿದ್ದವು. ಆದರೆ ಇಂದು ೨೧ನೇ ಶತಮಾನದಲ್ಲಿದ್ದೇವೆ. ಜನ ಬಹಳ ಸುಧಾರಣೆಗೊಂಡಿದ್ದಾರೆ. ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ. ಇಷ್ಟಾದರೂ ಕೆಲವರು ಏನೂ ಬದಲಾಗಿಲ್ಲ. ಈಗಲೂ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರೆ ಹಿಂದಿನ ಜನರಿಗೂ ಇಂದಿನವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಾಯಿತು.
ವಿಜಾಪುರದ ಸಿಂದಗಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ೧೬ ಬಾಲಕಿಯರ ಬಾಲ್ಯವಿವಾಹ ನಡೆದಿರುವ ಘಟನೆಯು ಪತ್ರಿಕೆಯಲ್ಲಿ ವರದಿಯಾಗಿದೆ. ಮುಖ್ಯಮಂತ್ರಿ ಸಮ್ಮುಖದಲ್ಲೇ ಇದು ನಡೆದಿದೆ. ಸಮಾಜದಲ್ಲಿ ಕದ್ದು ಮುಚ್ಚಿ ಸಾಕಷ್ಟು ಇಂತಹ ಮದುವೆಗಳಾಗುತ್ತವೆ. ಇವು ಸುದ್ದಿ ಆಗುವುದೇ ಇಲ್ಲ.
ಬಾಲ್ಯವಿವಾಹ ತಡೆಯಲು ವಿಶ್ವಸಂಸ್ಥೆಯ ‘ಯುನೆಸ್ಕೊ’ ಸೂಚನೆಯಂತೆ ಪ್ರತಿ ಜಿಲ್ಲೆಗೊಂದು ಮಕ್ಕಳ ಕಲ್ಯಾಣ ಸಮಿತಿ, ಗ್ರಾಮ ಪಂಚಾಯತಿಗೊಬ್ಬ ಅಧಿಕಾರಿಯನ್ನು ನೇಮಿಸಿದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವೈದ್ಯರು, ಪೋಲಿಸರು ಇದ್ದರೂ ಅವರ ಕಣ್ಣು ತಪ್ಪಿಸಿ ಮದುವೆಗಳು ನಡೆಯುತ್ತಿವೆ. ಇದು ವಿಷಾದಕರ ಸಂಗತಿ.