ದ್ವಿತೀಯ ಪಿ.ಯು. ರಸಾಯನ ವಿಜ್ಞಾನ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿರುವು ದರಿಂದ ವಿದ್ಯಾರ್ಥಿಗಳು ರೋಸಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳಿಂದ, ಅವರೆಲ್ಲ ಕೇವಲ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂದು ಭಾಸವಾಗುತ್ತದೆ.
ಇವರ ಭಂಡತನಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ತಲ್ಲಣಗೊಂಡಿದ್ದಾರೆ. ಬೇರೆಬೇರೆ ಪರೀಕ್ಷೆಗಳನ್ನು ಬರೆಯುವ ತವಕದಲ್ಲಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ತಪ್ಪಿತಸ್ಥರನ್ನು ವರ್ಗಾವಣೆ ಮಾಡುವುದರಿಂದ ಅವರಿಗೆ ಅನುಕೂಲ ಮಾಡಿಕೊಟ್ಟಂತಲ್ಲವೇ? ಎಲ್ಲರಿಂದ ಬೈಸಿ ಕೊಳ್ಳುವುದು ತಪ್ಪುತ್ತದೆ.
ಹೊಸ ಕುರ್ಚಿಯಲ್ಲಿ ಸಕಲ ಸರ್ಕಾರಿ ಸೌಲಭ್ಯಗಳಿಂದ ಅವರು ಮತ್ತೆ ಶೋಭಿಸುತ್ತಾರೆ. ಇನ್ನು ಅಮಾನತು ಮಾಡಿದರೆ ಆರಾಮಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಮುಂದೊಂದು ದಿನ ಬಡ್ತಿ ಪಡೆದು ವಾಪಸ್ ಬರುತ್ತಾರೆ. ಮರು ಪರೀಕ್ಷೆಯ ವೆಚ್ಚಭರಿಸುವವರಾರು? ಅದನ್ನು ತಪ್ಪಿತಸ್ಥರೇ ಭರಿಸುವಂತಾಗಬೇಕು. ವಿದ್ಯಾರ್ಥಿಗಳ ಸಮಯ, ಹಣ, ಶಕ್ತಿಯನ್ನು ಹಾಳು ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ಅಟ್ಟಬೇಕು. ಆಗ ಸರ್ಕಾರಿ ಕುರ್ಚಿಯಲ್ಲಿ ಕೂರುವ ಇತರರಿಗೂ ಭಯ ಬರಬಹುದು.