ನಿತೀಶ್ಕುಮಾರ್ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದ್ದಾರೆ. ಅದು ಅವರ ಮನದಾಳದ ಆಶಯವೋ ಅಥವಾ ತಾವು ಪಕ್ಷಾತೀತರೆಂದು ತೋರಿಸಿಕೊಳ್ಳುವ ಕಾತರವೋ, ಯು.ಪಿ.ಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ರಾಜಕಾರಣವೋ ಒಂದೂ ಅರ್ಥವಾಗುತ್ತಿಲ್ಲ.
ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿದ ನಂತರ ಈ ಪುರಸ್ಕಾರಕ್ಕೆ ಘನತೆ ಹೆಚ್ಚಿದ್ದು ನಿಜ. ಅಂತೆಯೇ ಈ ರಾಷ್ಟ್ರದಲ್ಲಿ ಅಸಮಾನತೆಗಳನ್ನು ಅಳಿಸಲು ಪ್ರಯತ್ನಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ಲೋಹಿಯಾ, ಕಾನ್ಶಿರಾಂರಂತಹ ಅನೇಕರಿಗೆ ಈ ಪುರಸ್ಕಾರ ದಕ್ಕಬೇಕಿದ್ದು ಈವರೆಗೆ ದಕ್ಕದೇ ಇದ್ದದ್ದಕ್ಕೆ ಕಾರಣಗಳನ್ನು ಹುಡುಕಬೇಕಿಲ್ಲವಷ್ಟೆ.
ಆದರೆ ಕಾಂಗ್ರೆಸ್ನವರೇ ಆಗಿದ್ದು ತನ್ನ ಒಡಲಲ್ಲಿ ಅಂಬೇಡ್ಕರ್, ಫುಲೆ, ಪೆರಿಯಾರ್ ಅವರನ್ನು ಇಟ್ಟುಕೊಂಡು ಈ ನೆಲದ ಅಸಹಾಯಕ ವರ್ಗಗಳಿಗೆ ಧ್ವನಿ ನೀಡಿದ್ದು ದೇವರಾಜ ಅರಸು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಅರಸು ಇಲ್ಲಿ ಹುಟ್ಟಿರದಿದ್ದರೆ ಇಲ್ಲಿನ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಪರಿಸ್ಥಿತಿ ಕಲ್ಪಿಸಿಕೊಳ್ಳಲಿಕ್ಕೂ ಕಷ್ಟವಾಗಿರುತ್ತಿತ್ತು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿಕ್ಕೂ ಅರಸರ ಕಾಣ್ಕೆ ಪ್ರತ್ಯಕ್ಷವಾಗೋ, ಪರೋಕ್ಷವಾಗೋ ಇದ್ದೇ ಇದೆ. ಅವರು ತಮ್ಮ ಸಚಿವ ಸಂಪುಟದಲ್ಲಿ ಅರಸರಿಗೆ ಭಾರತರತ್ನ ನೀಡಬೇಕೆಂಬ ನಿರ್ಣಯ ಅಂಗೀಕರಿಸಿ ಅವರದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟರೆ, ದಕ್ಕುವುದು ಅಸಾಧ್ಯವಾಗುವುದಿಲ್ಲ.