ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎನ್ನುವ ಗುಮ್ಮ ಮತ್ತೊಮ್ಮೆ ಸದ್ದು ಮಾಡತೊಡಗಿದೆ. ಇದು ದ್ವಿಚಕ್ರ ವಾಹನ ಸವಾರರ ಮೇಲಿನ ಏಕಮಾತ್ರ ಕಾಳಜಿಯಲ್ಲ ಎಂಬ ಸತ್ಯ ಸಾರಿಗೆ ಇಲಾಖೆಯೂ ಸೇರಿದಂತೆ ಎಲ್ಲರಿಗೂ ಗೊತ್ತಿರುವ ಸಂಗತಿ.
ಗಮನ ಸೆಳೆಯುವಂತಹ ಅಪಘಾತವಾದಾಗ ಇಲಾಖೆಗೆ ಸುಪ್ರೀಂಕೋರ್ಟ್ ಎಂದೋ ಹೇಳಿದ ಮಾತು ನೆನಪಿಗೆ ಬಂದು ‘ಕಡ್ಡಾಯ ಹೆಲ್ಮೆಟ್ ಜಾರಿ’ ಎಂದು ಬಡಬಡಿಸಿ ಮತ್ತೆ ನಿದ್ರೆಗೆ ಜಾರುತ್ತದೆ. ಕೋರ್ಟ್ ಆಜ್ಞೆಯನ್ನು ನಗದಾಗಿಸಿಕೊಳ್ಳ ಬಯಸುವ ಹೆಲ್ಮೆಟ್ ಕಂಪೆನಿಗಳು ‘ತಮ್ಮದೇ ರೀತಿಯಲ್ಲಿ’ ಒತ್ತಡ ಹೇರಿದಾಗ ಇಲಾಖೆ ಮತ್ತೆ ಎಚ್ಚರಗೊಳ್ಳುತ್ತದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಇಲಾಖೆ ಈ ಕಡ್ಡಾಯ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದೆ.
ಇಲಾಖೆ ಮೊದಲು ತನ್ನದೇ ಸರ್ಕಾರಿ ಸೋದರ ಸಂಸ್ಥೆಗಳಾದ ಬಿಬಿಎಂಪಿ, ಬಿಡಿಎಗಳಿಗೆ ನಗರದ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡುವಂತೆ ತಾಕೀತು ಮಾಡಲಿ. ಆ ನಂತರ ರಸ್ತೆ ಅಪಘಾತಗಳಲ್ಲಿ ಆಗುವ ಸಾವು ನೋವಿನ ಅಧ್ಯಯನ ನಡೆಸಲಿ. ಆಗಲೂ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದರೆ ಆಗ ಹೆಲ್ಮೆಟ್ ಕಡ್ಡಾಯದ ಮಾತನಾಡಲಿ. ಏಕೆಂದರೆ ಇತ್ತೀಚೆಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಘಟಿಸಿದ ಮಹಿಳಾ ಟೆಕ್ಕಿಯ ಸಾವೂ ಹದಗೆಟ್ಟ ರಸ್ತೆಯಿಂದಲೇ ಆಗಿದ್ದು ಎಂಬುದು ಎಲ್ಲರಿಗೂ ಗೊತ್ತಲ್ಲವೆ?