ಮಾನಹಾನಿಗೆ ಸಂಬಂಧಿಸಿದ ಐಪಿಸಿಯ ದಂಡನಾರ್ಹ ಕಲಂಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ (ಪ್ರ.ವಾ., ಮೇ 14). ಇದರಿಂದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ವಿಶೇಷವಾಗಿ ಪತ್ರಿಕಾ ಮಾಧ್ಯಮದವರ ಸ್ವಾತಂತ್ರ್ಯಕ್ಕೆ ಮಿತಿ ಹೇರಿದಂತಾಗುತ್ತದೆ. ಸ್ವಾತಂತ್ರ್ಯ ಪೂರ್ವದ ವಸಾಹತು ಕಾಲದಿಂದಲೂ ಇರುವ ಕಾನೂನಿಗೆ ಈಗಿನ ಸನ್ನಿವೇಶಗಳಿಗೆ ಸೂಕ್ತವೆನಿಸುವಂತೆ ಮಾರ್ಪಾಡು ಮಾಡಬೇಕಾದ ಅವಶ್ಯಕತೆ ಇದೆ.
ಈ ತೀರ್ಪಿನಿಂದ ಕ್ಷುಲ್ಲಕ ಕಾರಣಗಳಿಗೂ ಮಾನಹಾನಿ ದಾವೆ ಹೂಡುವವರ ಸಂಖ್ಯೆ ಹೆಚ್ಚಾಗಿ ನ್ಯಾಯಾಲಯದ ಸಮಯ ವ್ಯಯವಾಗುತ್ತದೆ. ಕೆಲವು ರಾಜಕಾರಣಿಗಳು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುವುದರ ವಿರುದ್ಧ ಮಿತಿ ಹೇರಬಹುದು. ಸಾಮಾಜಿಕ ಹಿತದೃಷ್ಟಿಯಿಂದ ನೀಡುವ ಹೇಳಿಕೆಗಳು ಮತ್ತು ಬರಹಗಳಿಗೆ ಇದರ ವ್ಯಾಪ್ತಿಯಿಂದ ವಿನಾಯಿತಿ ದೊರೆಯಬೇಕು. ಮಾನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲ ಮಾರ್ಪಾಡುಗಳನ್ನು ಮಾಡುವ ಬಗ್ಗೆ ಕೋರ್ಟ್ ಚಿಂತಿಸಲಿ.