ನಾವು ಆಡುವ ಮಾತಿನ ಬಗ್ಗೆ ಅರಿವಿರಬೇಕು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಮಾತನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಆದರೆ ಈಗಿನ ನಮ್ಮ ರಾಜಕಾರಣಿಗಳಿಗೆ ನಾಲಗೆ ಮೇಲೆ ನಿಯಂತ್ರಣವೇ ಇಲ್ಲ. ಅವರ ಹೇಳಿಕೆಗಳೇ ಅವರ ವ್ಯಕ್ತಿತ್ವ ಹಾಗೂ ಸಂಸ್ಕೃತಿಯನ್ನು ತೋರಿಸುತ್ತವೆ.
ಸಂಸದೆ ಶೋಭಾ ಕರದ್ಲಾಂಜೆ ಅವರು ರಾಜ್ಯದ ಮುಖ್ಯಮಂತ್ರಿ ಅವರನ್ನು ‘ನರೇಂದ್ರ ಮೋದಿಯವರ ಕೂದಲಿಗೆ ಸಮಾನರಲ್ಲ’ ಎಂದು ಟೀಕಿಸಿರುವುದು ನೋಡಿದರೆ ‘ಇದು ಯಾವ ಸಂಸ್ಕೃತಿ ತಾಯಿ’ ಎಂದು ಕೇಳಬೇಕೆನಿಸುತ್ತದೆ. ಅವರು ಕುಳಿತಿರುವ ಸ್ಥಾನಕ್ಕಾದರೂ ಗೌರವ ಕೊಡುವುದು ಬೇಡವೇ? ಸಂಸ್ಕೃತಿಯನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವ ಬಿಜೆಪಿಯವರು ಮೈಮೇಲೆ ಭೂತ ಹೊಕ್ಕಂತೆ ಮಾತಾಡುತ್ತಿರುವುದು ಏಕೆ?
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವಿವರಣೆ ನೀಡುವಾಗ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಸಾಮೂಹಿಕ ಅತ್ಯಾಚಾರಕ್ಕೆ ಹೊಸ ವ್ಯಾಖ್ಯಾನ ನೀಡಿ ನಗೆಪಾಟಲಿಗೆ ಈಡಾದರು. ಅವರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಲೇ ರಾಗ ಬದಲಿಸಿದರು. ಏನೋ ಸಬೂಬು ಹೇಳಿ ನುಣುಚಿಕೊಳ್ಳಲು ಯತ್ನಿಸಿದರು. ಇದನ್ನೆಲ್ಲ ನೋಡಿದರೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವ ನಮ್ಮ ರಾಜಕಾರಣಿಗಳು ಯೋಚಿಸಿ ತೂಕದಿಂದ ಮಾತನಾಡುವ ಔಚಿತ್ಯವನ್ನೇ ಮರೆತಂತೆ ಕಾಣುತ್ತದೆ.