ಮೈಸೂರಿನ ನನ್ನ ಸ್ನೇಹಿತರನ್ನು ಒಳಗೊಂಡ 38 ಮಂದಿಯ ತಂಡ ಈಚೆಗೆ ಯಾವುದೇ ಒತ್ತಡವಿಲ್ಲದೆ ಕಾಶಿ ಯಾತ್ರೆ ಪೂರೈಸಿಕೊಂಡು ಮರಳಿದೆ. ಅವರ ಯಾತ್ರೆ ಅಷ್ಟೊಂದು ನಿರಾತಂಕವಾಗಿ ಇದ್ದುದಕ್ಕೆ ಅವರೆಲ್ಲರೂ ಚಿನ್ನದ ಆಭರಣಗಳ ಬದಲಿಗೆ ಕೃತಕ ಆಭರಣಗಳನ್ನು ತೊಟ್ಟುಕೊಂಡು ಹೋಗಿದ್ದುದೇ ಕಾರಣ.
ಆದರೆ ಮೈಸೂರು– ಶಿರಡಿಯ ಯಾತ್ರಿಕರು ರೈಲಿನಲ್ಲಿ ದರೋಡೆಗೆ ಒಳಗಾಗಿ ಚಿನ್ನ– ಹಣ ಎಲ್ಲವನ್ನೂ ಕಳೆದುಕೊಂಡಿದ್ದಾರೆ (ಪ್ರ.ವಾ. ಮೇ 28) ಜೊತೆಗೆ ಅವರು ಏಟನ್ನೂ ತಿನ್ನಬೇಕಾಯಿತು.
ಯಾತ್ರೆಗೆ, ಪ್ರವಾಸಕ್ಕೆ ತೆರಳುವವರಿಗೆ ಚಿನ್ನಾಭರಣ ಏಕೆ ಬೇಕು? ನಕಲಿ ಒಡವೆಗಳು ಸಾಲದೆ? ಯಾತ್ರೆ ಅಂದರೆ ಅದೇನು ಮದುವೆ ಮನೆಯೇ? ಚಿನ್ನವನ್ನು ತೊಟ್ಟು ಯಾತ್ರಿಕರು ಪರೋಕ್ಷವಾಗಿ ದರೋಡೆಗಾರರನ್ನು ಅಕೃತ್ಯಕ್ಕೆ ಪ್ರೇರೇಪಿಸಿದಂತೆ ಆಗುವುದಿಲ್ಲವೇ?
ನಕಲಿ ಚಿನ್ನ ಧರಿಸಿ ನಿಶ್ಚಿಂತೆಯಿಂದ ದೇಶ ಸುತ್ತುವ ಬದಲು, ಚಿನ್ನ ತೊಟ್ಟುಕೊಂಡು ಹೋದರೆ ಗಂಡಾಂತರವನ್ನು ಆಹ್ವಾನಿಸಿದಂತೆ ಆಗುತ್ತದೆ. ಜೊತೆಗೆ ನಿಶ್ಚಿಂತೆಯ ನಿದ್ರೆಯೂ ಬರದು. ಇದು ಕೋಲನ್ನು ನೀಡಿ ಪೆಟ್ಟು ತಿಂದಂತೆ. ಯಾತ್ರೆಗೆ ಹೊರಡುವವರೆಲ್ಲರೂ ಚಿಂತಿಸಬೇಕಾದ ವಿಷಯ ಇದು.