ಇತ್ತೀಚೆಗೆ ಸಾರಿಗೆ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿಯವರು ಬಿಬಿಎಂಪಿ ವಲಯದ ಸಿಂಗಸಂದ್ರ ವಾರ್ಡಿನ ಕೂಡ್ಲು ಗ್ರಾಮದಲ್ಲಿ ಕಿರಿದಾದ ರಸ್ತೆ ಅಗಲೀಕರಣದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಗ್ರಾಮಸ್ಥರು ತಮ್ಮ ಸ್ವತ್ತುಗಳನ್ನು ರಸ್ತೆ ಅಗಲೀಕರಣದ ಮಾಡಲು ಮುಕ್ತ ಮನಸ್ಸಿನಿಂದ ಬಿಟ್ಟುಕೊಟ್ಟು ಸಹಕರಿಸಿರುವುದು ಸ್ವಾಗತಾರ್ಹ. ಇದರಿಂದ ರಸ್ತೆ ಅಗಲೀಕರಣವಾದರೆ ಅಲ್ಲಿನ ಆಸ್ತಿಯ ಮೌಲ್ಯ ಮತ್ತು ಗ್ರಾಮದ ಸೌಂದರ್ಯವು ಹೆಚ್ಚಿದಂತೆ ಆಗುತ್ತದೆ. ಅದರಂತೆ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಲಗ್ಗೆರೆ ಗ್ರಾಮವು ಬೆಂಗಳೂರು ಹೃದಯ ಭಾಗದಲ್ಲಿ ಇದ್ದು, ಸಮೀಪದಲ್ಲಿ ಹೊರವರ್ತುಲ ರಸ್ತೆ ಇದ್ದು ಮತ್ತು ಶೀಘ್ರದಲ್ಲಿಯೇ ಮೆಟ್ರೊ ರೈಲು ಹಾದು ಹೋಗುವ ಸಂಭವ ಇರುತ್ತದೆ.
ದುರದುಷ್ಟಕರ ಸಂಗತಿಯೆಂದರೆ ಲಗ್ಗೆರೆ ಒಳಗ್ರಾಮದ ಸುಮಾರು 300 ಅಡಿಗಳಷ್ಟು ಮಾತ್ರ ಮುಖ್ಯರಸ್ತೆಯ ಕಿರಿದಾಗಿದ್ದು. ಈ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಲು ಸತತ 10–12 ವರ್ಷಗಳಿಂದಲೂ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರು, ಶಾಸಕರು, ಬಿಬಿಎಂಪಿ ಸದಸ್ಯರುಗಳಲ್ಲಿ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಸಹ ಈ ತನಕ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲ.
ಈಗಲಾದರೂ ಸಂಬಂಧಪಟ್ಟ ಈ ಕ್ಷೇತ್ರದ ಶಾಸಕರಾಗಲೀ, ಬಿಬಿಎಂಪಿಯ ನೂತನ ಆಯುಕ್ತರಾಗಲಿ, ಆಡಳಿತಾಧಿಕಾರಿಯಾಗಲಿ, ಲೋಕಸಭಾ ಸದಸ್ಯರಾಗಲಿ ಸೂಕ್ತ ಕ್ರಮ ಕೈಗೊಂಡು ಲಗ್ಗೆರೆಗೆ ಭೇಟಿ ನೀಡಿ ಕಿರಿದಾದ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿಕೊಟ್ಟು, ಬಿಎಂಟಿಸಿ ಬಸ್ಸುಗಳು ಸುಲಲಿತವಾಗಿ ಬಂದು ಹೋಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೆಂದು ಆಶಿಸೋಣವೇ?